ಡೈಲಿ ವಾರ್ತೆ:23 ಜನವರಿ 2023

ವಿಜಯ ಕಾಲೇಜಿನ‌ ಬಾಲಕಿಯರ ಶೌಚಾಲಯಕ್ಕೆ ನುಗ್ಗಿ ಬೆದರಿಕೆ: ಆರೋಪಿ ಅಜಯ್ ಕುಮಾರ್ ಬಂಧನ

ಬೆಂಗಳೂರು: ಕಾಲೇಜಿನ ವಿದ್ಯಾರ್ಥಿನಿಯರ ಶೌಚಾಲಯಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದ ಆರೋಪಿ ಅಜಯ್ ಕುಮಾರ್ (42)ನನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹನುಮಂತ ನಗರದ 2ನೇ ಹಂತ ಸುಂಕೇನಹಳ್ಳಿ ಎಕ್ಸ್’ಟೆನ್ಶನ್ ನಿವಾಸಿಯಾಗಿರುವ ಅಜಯ್ ಕುಮಾರ್, ಜಯನಗರ 4ನೇ ಬ್ಲಾಕ್’ನಲ್ಲಿರುವ ವಿಜಯ ಕಾಲೇಜಿಗೆ ಜ. 10ರಂದು ನುಗ್ಗಿ ವಿದ್ಯಾರ್ಥಿನಿಯರ ಶೌಚಾಲಯಕ್ಕೆ ಹೋಗಿದ್ದಾನೆ. ಅದೇ ವೇಳೆ ವಿದ್ಯಾರ್ಥಿನಿಯೊಬ್ಬಳು ಶೌಚಾಲಯಕ್ಕೆ ಹೋದಾಗ ಅಜಯ್ ಕುಮಾರ್ ಆಕೆಯನ್ನು ಹಿಡಿದುಕೊಂಡು ಎಳೆದಾಡಿ ಆಕೆಗೆ ಮುಜುಗರವನ್ನುಂಟು ಮಾಡಿ ಬಾಯಿಯನ್ನು ಕೈಗಳಿಂದ ಮುಚ್ಚಿ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಈ ಬಗ್ಗೆ ವಿದ್ಯಾರ್ಥಿನಿ ಕಾಲೇಜಿನ ಪ್ರಾಂಶುಪಾಲರಿಗೆ ತಿಳಿಸಿದ್ದರು. ಪ್ರಾಂಶುಪಾಲರು ಜಯನಗರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕಾಲೇಜಿನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಈತನ ಕೃತ್ಯ ಬೆಳಕಿಗೆ ಬಂದಿತ್ತು.

ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತ ಕೃಷ್ಣಕಾಂತ್ ಅವರ ಮಾರ್ಗದರ್ಶನದಲ್ಲಿ ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಮಂಜುನಾಥ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸಿದೆ.