ಡೈಲಿ ವಾರ್ತೆ: 27 ಜನವರಿ 2023

ತೆರೀಕೆರೆ: ಲಂಚ ಬಾಕ ತಾಲೂಕು ಕಚೇರಿಯ ಸರ್ವೇಯರ್ ಲೋಕಾಯುಕ್ತ ಬಲೆಗೆ

ಚಿಕ್ಕಮಗಳೂರು: ಜಮೀನಿನ ಸರ್ವೆ ನಕಾಶೆ ನೀಡಲು ರೈತರೊಬ್ಬರಿಂದ ಲಂಚ ಪಡೆಯುತ್ತಿದ್ದ ತರೀಕೆರೆ ತಾಲೂಕು ಕಚೇರಿಯ ಸರ್ವೇಯರ್ ಒಬ್ಬನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.

ತರೀಕೆರೆ ತಾಲೂಕು ಕಚೇರಿಯ ಸರ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸರ್ವೇಯರ್ ರವಿಕುಮಾರ್ ರೈತನಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ಬಲೆ ಬಿದ್ದ ಸಿಬ್ಬಂದಿಯಾಗಿದ್ದಾನೆ.

ಈತ ತರೀಕೆರೆ ತಾಲೂಕಿನ ಬೇಗೂರಿನ ನಾಗರಾಜ್ ಎಂಬ ರೈತನ ಜಮೀನಿನ ಸರ್ವೆ ನಕಾಶೆ ನೀಡಲು 5 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದ್ದು, ಲಂಚ ಕೇಳುತ್ತಿರುವ ಬಗ್ಗೆ ನಾಗರಾಜ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಶುಕ್ರವಾರ ಬೆಳಗ್ಗೆ ಲೋಕಾಯುಕ್ತ ಇನ್‌ಸ್ಪೆಕ್ಟರ್ ಅನಿಲ್ ರಾಥೋಡ್ ನೇತೃತ್ವದ ತಂಡ ತರೀಕೆರೆ ತಾಲೂಕು ಕಚೇರಿ ಮೇಲೆ ದಾಳಿ ನಡೆಸಿ, ಲಂಚ ಸ್ವೀಕರಿಸುತ್ತಿದ್ದ ರವಿಕುಮಾರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.