ಡೈಲಿ ವಾರ್ತೆ: 30 ಜನವರಿ 2023

ಶಿರಾಡಿ ಪರಿಸರದಲ್ಲಿ ಆನೆ ದಾಳಿ: ಅಪಾರ ಪ್ರಮಾಣದ ಬೆಳೆ ನಷ್ಟ

Lಉಪ್ಪಿನಂಗಡಿ: ಶಿರಾಡಿ ಪರಿಸರದಲ್ಲಿ ಆನೆ ದಾಳಿ ನಡೆಸಿ ಅಡಿಕೆ ಗಿಡಗಳನ್ನು ಮತ್ತು ಬಾಳೆ ಗಿಡಗಳನ್ನು ಧ್ವಂಸಗೊಳಿಸಿದೆ.

ಶನಿವಾರ ತಡರಾತ್ರಿ ದಿವಾಕರ ಅವರ ತೋಟಕ್ಕೆ ಒಂಟಿ ಸಲಗ ನುಗ್ಗಿ ಫ‌ಸಲಿಗೆ ಬಂದಿರುವ ಸುಮಾರು 30 ಅಡಿಕೆ ಗಿಡಗಳನ್ನು, 30ರಿಂದ 40 ಅಡಿಕೆ ಗಿಡಗಳನ್ನು ಸಂಪೂರ್ಣ ಹಾನಿಗೆಡವಿದೆ. ಒಂದು 25 ವರ್ಷ ಹಳೆಯ ಸಹಿತ ಎರಡು ತೆಂಗಿನ ಮರಗಳನ್ನು ಕೂಡ ಬೀಳಿಸಿ ಅದರಲ್ಲಿನ ಎಳೆಯ ಗರಿಗಳನ್ನು ತಿಂದಿದೆ. ಇದರಿಂದ ಲಕ್ಷ ರೂ.ಗಳಿಗೂ ಮಿಕ್ಕಿ ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ. ಅರಣ್ಯ ಪಾಲಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನದಿ ದಾಟಿ ಬಂದಿದ್ದ ಆನೆ:
ಕೊಣಾಜೆ ಗ್ರಾಮದಿಂದ ಹೊಳೆ ದಾಟಿ ಆನೆ ದಿವಾಕರ ಅವರ ತೋಟಕ್ಕೆ ಬಂದಿದೆ. ತೋಟದಲ್ಲಿ ಸಾಕಷ್ಟು ಹಾನಿ ಮಾಡುತ್ತಾ ಅವರ ಮನೆಯ ಕೊಟ್ಟಿಗೆಯ ಹತ್ತಿರದವರೆಗೂ ಬಂದಿತ್ತು. ಅಲ್ಲಿಂದ ಹಿಂದಕ್ಕೆ ಸಾಗಿದ ಆನೆ ಬಂದ ದಾರಿಯಲ್ಲಿಯೇ ವಾಪಸಾಗಿ ನದಿ ದಾಟಿ ಕಾಡು ಸೇರಿದೆ ಎಂದು ಮನೆಯವರು ತಿಳಿಸಿದ್ದಾರೆ.

ನಾಲ್ಕು ವರ್ಷಗಳಿಂದ ಆನೆ ದಾಳಿ ನಡೆಸುತ್ತಿದೆ. ಮೂರು ತಿಂಗಳ ಹಿಂದೆ ಕೂಡ ತೋಟಕ್ಕೆ ಆನೆ ಬಂದಿತ್ತು ಎಂದು ಮನೆ ಮಾಲಕರು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಈ ಪರಿಸರದ ಸಮೀಪದಲ್ಲೇ ಆನೆ ದಾಳಿ ನಡೆಸಿ ಓರ್ವ ಸಾವನ್ನಪ್ಪಿದ್ದು, ಇದರಿಂದ ಆಸುಪಾಸಿನಲ್ಲಿ ಆತಂಕ ಹುಟ್ಟಿಸಿದೆ.