ಡೈಲಿ ವಾರ್ತೆ: 31 ಜನವರಿ 2023

ಪೋಲೆಂಡ್ ನಲ್ಲಿ ಕೇರಳ ಮೂಲದ ಯುವಕನನ್ನು ಚೂರಿಯಿಂದ ಇರಿದು ಕೊಲೆ

ತ್ರಿಶೂರ್:ಪೋಲೆಂಡ್ ನಲ್ಲಿ ಮಲಯಾಳಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ತ್ರಿಶೂರ್ ಜಿಲ್ಲೆಯ ಒಲ್ಲೂರು ಮೂಲದ ಸೂರಜ್ (23) ಕೊಲೆಯಾದ ಯುವಕ. ಒಲ್ಲೂರಿನ ಮುರಳೀಧರನ್ ಮತ್ತು ಸಂಧ್ಯಾ ದಂಪತಿಯ ಪುತ್ರ ಸೂರಜ್ ಕಳೆದ ಸೆಪ್ಟೆಂಬರ್‌ನಲ್ಲಿ ಪೋಲೆಂಡ್‌ಗೆ ತೆರಳಿದ್ದರು.

ಸೂರಜ್ ಪೋಲೆಂಡ್‌ನ ಸ್ಲೂಬಿಸ್‌ನಲ್ಲಿರುವ ಮಾಂಸ ಸಂಸ್ಕರಣಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು.
ವೀಕೆಂಡ್ ದಿನ ಮಲಯಾಳಿ ಯುವಕರು ಸಿಗರೇಟ್ ಸೇದುವ ವಿಚಾರವಾಗಿ ಜಾರ್ಜಿಯಾ ಮೂಲದ ಯುವಕರೊಂದಿಗೆ ಮಾತಿನ ಚಕಮಕಿ ನಡೆಸಿದ್ದಾರೆ. ಎರಡು ಗುಂಪುಗಳ ನಡುವಿನ ವಾಗ್ವಾದ ವಿಕೋಪಕ್ಕೆ ತಿರುಗಿ ಜಾರ್ಜಿಯನ್ ಮೂಲದ ಸ್ಥಳೀಯರು ಸೂರಜ್ ಮತ್ತು ಇತರೆ ನಾಲ್ವರು ಮಲೆಯಾಳಿ ಯುವಕರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ. ಘಟನೆಯಲ್ಲಿ ಗಂಭೀರವಾಗಿದ್ದ ಸೂರಜ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.