ಡೈಲಿ ವಾರ್ತೆ: 30 ಜನವರಿ 2023

ಬಿಜೆಪಿ ಜೊತೆಗೆ ಮೈತ್ರಿಗಿಂತ ಸಾಯುವುದು ಲೇಸು: ನಿತೀಶ್‌ ಕುಮಾರ್‌

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಜತೆಗೆ ಮೈತ್ರಿಯ ಪ್ರಶ್ನೆಯೇ ಇಲ್ಲ ಎಂದಿದ್ದ ಬಿಜೆಪಿಗೆ, ಸಿಎಂ ನಿತೀಶ್‌ ಕುಮಾರ್‌ ಸೋಮವಾರ ತಿರುಗೇಟು ನೀಡಿದ್ದಾರೆ.
ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ಸಾಯುವುದೇ ಉತ್ತಮವೆಂದು ಹೇಳಿದ್ದಾರೆ. ಕಳೆದ ಬಾರಿ ಬಿಜೆಪಿ ಜತೆಗಿನ ಮೈತ್ರಿ ತೊರೆದು, ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಜತೆಗೆ ಕೈ ಜೋಡಿಸುವ ಮೂಲಕ ನಿತೀಶ್‌ ಬಿಜೆಪಿಗೆ ದ್ರೋಹವೆಸಗಿದ್ದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಂಥ ಮೋಸದ ಜಾಲಕ್ಕೆ ಸಿಲುಕುವುದಿಲ್ಲ ಎಂದು ಬಿಜೆಪಿ ಘಟಕದ ಮುಖ್ಯಸ್ಥ ಸಂಜಯ್‌ ಜೈಸ್ವಾಲ್‌ ಹೇಳಿದ್ದರು

ಇದಕ್ಕೆ ಪ್ರತಿಕ್ರಿಯಿಸಿರುವ ನಿತೀಶ್‌, ನನ್ನ ಬೆಂಬಲಿಗರ ಮತವನ್ನು ಪಡೆಯಲು ಬಿಜೆಪಿ ಮೈತ್ರಿ ಮಾಡಿಕೊಂಡಿತ್ತು ಅಷ್ಟೇ. ನಾನು ಸಾಯುತ್ತೇನೆ ಹೊರತು, ಮತ್ತೆ ಆ ಪಕ್ಷದ ಜತೆಗೆ ಕೈ ಜೋಡಿಸುವುದಿಲ್ಲ ಎಂದಿದ್ದಾರೆ.