ಡೈಲಿ ವಾರ್ತೆ: 31 ಜನವರಿ 2023

ಕಾರ್ಕಳ: ಗೇರುಬೀಜ ಫ್ಯಾಕ್ಟರಿ ಬಳಿ ಲಾರಿ ಚಾಲಕನ ಕೊಲೆ

ಕಾರ್ಕಳ: ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿ ಶ್ರೀದೇವಿ ಕ್ಯಾಶ್ಯ ಫ್ಯಾಕ್ಟರಿ ಆವರಣದಲ್ಲಿ ಗೇರುಬೀಜ ಲೋಡ್ ತಂದ ಲಾರಿ ಚಾಲಕನನ್ನು ಇರಿದು ಸಾಯಿಸಿದ ಕೃತ್ಯ ಸೋಮವಾರ ಸಂಜೆ ಸಂಭವಿಸಿದೆ. ತಮಿಳುನಾಡಿನ ಲಾರಿ ಚಾಲಕ ಮಣಿ(36) ಕೊಲೆಯಾದವರು. ಇನ್ನೊಂದು ಲಾರಿಯ ಚಾಲಕ ವೀರಬಾಹು ಎಂಬಾತ ಕೊಲೆ ಮಾಡಿರುವ ಶಂಕೆಯಿದೆ.

ತಮಿಳುನಾಡಿನಿಂದ ಎರಡು ಲಾರಿಗಳಲ್ಲಿ ಗೇರು ಬೀಜ ತರಲಾಗಿತ್ತು. ಅನ್‌ಲೋಡ್ ಆಗದ ಕಾರಣ ಲಾರಿಗಳನ್ನು ಫ್ಯಾಕ್ಟರಿಯ ಆವರಣದಲ್ಲಿ ನಿಲ್ಲಿಸಿ, ಚಾಲಕರು ಮತ್ತು ಬದಲಿ ಚಾಲಕರು ಅಲ್ಲಿಯೇ ಇದ್ದರು. ಸಂಜೆ 4 ಗಂಟೆ ಹೊತ್ತಿಗೆ ಫ್ಯಾಕ್ಟರಿಯ ಮೇಲ್ಗಡೆ ಕೆಲಸ ಮಾಡುತ್ತಿದ್ದ ಬಜಗೋಳಿ ಅಂಗರಬೆಟ್ಟು ಬನತಪಲೆಯ ಪ್ರವೀಣ್ ಪೂಜಾರಿ ಅವರಿಗೆ ಕೆಳಗೆ ಜೋರಾಗಿ ಕೂಗಿದ ಶಬ್ದ ಕೇಳಿದ್ದು, ಅವರು ಹೋಗಿ
ನೋಡಿದಾಗ ಮಣಿಯನ್ನು ಕುತ್ತಿಗೆಗೆ ಶಾಲು ಬಿಗಿದು ಭುಜಕ್ಕೆ ಇರಿದು ಸಾಯಿಸಿರುವುದು ಕಂಡುಬಂದಿದೆ. ವೀರಬಾಹು ಮತ್ತು ಮಣಿಯ ನಡುವೆ ಯಾವುದೋ ಕಾರಣಕ್ಕೆ ಜಗಳವಾಗಿದ್ದು, ವೀರಬಾಹುವೇ ಸಾಯಿಸಿರಬೇಕೆಂದು ಅನುಮಾನಿಸಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.
ವೀರಬಾಹುವನ್ನು ವಶಕ್ಕೆ ಪಡೆದು ತನಿಖೆ
ನಡೆಸುತ್ತಿದ್ದಾರೆ.