ಡೈಲಿ ವಾರ್ತೆ:05 ಫೆಬ್ರವರಿ 2023

ಉತ್ತರ ಕನ್ನಡ: ದೈವ ದರ್ಶನಕ್ಕೆಂದು ಬಂದಿದ್ದ ವಿವಾಹಿತ ಮಹಿಳೆಗೆ ನರ್ತಕ ಪಾತ್ರಿ ಮದುವೆಯಾಗುವುದಾಗಿ ವಾಗ್ದಾನ.!(ವಿಡಿಯೋ ವೀಕ್ಷಿಸಿ)

ಅಂಕೋಲಾ : ಕನ್ನಡದ ಕಾಂತಾರ ಸಿನಿಮಾ ಬಿಡುಗಡೆಯಾದ ಬಳಿಕ ದಕ್ಷಿಣ ಕನ್ನಡದ ದೈವಾರಾಧನೆ ಮೇಲೆ ಜನರಿಗೆ ಭಕ್ತಿ, ನಂಬಿಕೆ ಹೆಚ್ಚಾಗಿದೆ. ದೈವಾರಾಧನೆ ನೋಡಲು ದೇಶ, ರಾಜ್ಯ, ಜಿಲ್ಲೆಗಳಿಂದ ಆಗಮಿಸುತ್ತಿದ್ದಾರೆ. ಆದ್ರೆ ಇದೇ ದೈವ ದರ್ಶನಗಳನ್ನು ದುರ್ಬಳಕೆ ಮಾಡಿಕೊಂಡು ಜನರಿಗೆ ಮೋಸ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾತು ಕೇಳಿ ಬಂದಿದೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಂಬಾರಕೊಡ್ಲೆ ಗ್ರಾಮದಲ್ಲಿ ದೈವ ದರ್ಶನದ ವೇಳೆ ಪಾತ್ರಿಯನೊಬ್ಬ ವಿವಾಹಿತ ಮಹಿಳೆಗೆ ಮದುವೆಯಾಗುವುದಾಗಿ ನುಡಿದಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಾಗೂ ನೆಟ್ಟಿಗರಿಂದ ಟೀಕೆಗೆ ಗ್ರಾಸವಾಗಿದೆ.

ದೈವ ದರ್ಶನಕ್ಕೆಂದು ಬೆಳಗಾವಿಯಿಂದ ಬಂದಿದ್ದ ಮದುವೆಯಾದ ಮಹಿಳೆಗೆ, ದುರ್ಗಾದೇವಿ ಆಹ್ವಾನವಾಗುತ್ತೆ ಎಂದು ನಂಬಲಾದ ಪಾತ್ರಿಯೊಬ್ಬರು ಮದುವೆಯಾಗುವುದಾಗಿ ವಾಗ್ದಾನ ಮಾಡಿದ್ದಾರೆ. ದೇವತಾ ಕಾರ್ಯದಲ್ಲಿ ಪಂಜೆಯನ್ನುಟ್ಟು ಮೈ ಮೇಲೆ ಅರಿಶಿಣ ಚೆಲ್ಲಿಕೊಳ್ಳುತ್ತಾ ಕಾಂತಾರ ಸ್ಟೈಲ್‌ನಲ್ಲಿ ಓ… ಎಂದು ಕೂಗುತ್ತ ಈ ಬಾಲಕಿಯನ್ನ ಈ ಬಾಲಕ ಮದುಗೆಯಾಗುತ್ತಾನೆ. ಇವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿಯಾಗಿ, ಅರ್ಧನಾರೇಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ. ಇಂದು ಅಥವಾ ನಾಳೆ ಧರ್ಮಸ್ಥಳ, ಮಂತ್ರಾಲಯ, ಇದೇ ಸ್ಥಳದಲ್ಲಿ ಈ ಬಾಲಕಿ ಕೊರಳಿಗೆ ಈ ಬಾಲಕನ ಕೈಯಿಂದ ತಾಳಿ ಬೀಳುತ್ತೆ. ಇದು ಸತ್ಯ ಸತ್ಯ ಎಂದು ಪಾತ್ರಿ ನುಡಿದಿದ್ದಾರೆ. ಈ ರೀತಿ ಪಾತ್ರಿ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಡಿಕೆ ಹಿಂಗಾರದಿಂದ ಬಡಿದುಕೊಳ್ಳುತ್ತ ಡಮರು, ಡಕ್ಕೆ, ತಾಳದ ಲಯಕ್ಕೆ ನರ್ತನ ಮಾಡುತ್ತ ಪಾತ್ರಿ ವರ್ತಿಸಿದ್ದು ವಿವಾಹಿತ ಮಹಿಳೆಯನ್ನ ವರೆಸುವ ಸಲುವಾಗಿ ದೈವದ ಹೆಸರನ್ನ ಬಳಿಸಿಕೊಂಡಿದ್ದಾನೆ ಎಂದು ಪಾತ್ರಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ. ಇನ್ನು ನರ್ತಕ ಪಾತ್ರಿಗೂ ಮದುವೆಯಾಗಿ ಹೆಂಡತಿ ಬಿಟ್ಟು ಹೋಗಿದ್ದಾಳೆ, ವಿವಾಹಿತ ಮಹಿಳೆಗೂ ಗಂಡ ಬಿಟ್ಟಿರುವ ಮಾಹಿತಿ ಇದ್ದು ದೇವರ ಹೆಸರಿನಲ್ಲಿ ಪಾತ್ರಿ ಈ ರೀತಿ ನಟಿಸಿದ್ದಾರೆ ಎನ್ನಲಾಗುತ್ತಿದೆ. ಪಾತ್ರಿಯ ಮೇಲೆ ದುರ್ಗಾದೇವಿ ಆಹ್ವಾನವಾಗುತ್ತೆ ಎಂದು ನಂಬಿ ಇಲ್ಲಿಗೆ ಭಕ್ತರು ಬರುತ್ತಾರೆ. ಹತ್ತಾರು ವರ್ಷಗಳಿಂದ ಈ ಸ್ಥಳದಲ್ಲಿ ಈ ಆಚರಣೆ ನಡೆದುಕೊಂಡು ಬರುತ್ತಿದೆ.