ಡೈಲಿ ವಾರ್ತೆ:07 ಫೆಬ್ರವರಿ 2023

ಮೂಡುಬಿದಿರೆ: ಬುದ್ದಿ ಮಾತು ಹೇಳಿದ ವ್ಯಕ್ತಿಯ ಮೇಲೆ ಟಿಪ್ಪರ್ ಚಲಾಯಿಸಿ ಕೊಲೆ ಮಾಡಿದ ಆರೋಪಿಯ ಬಂಧನ

ಮೂಡುಬಿದಿರೆ : ಧೂಳು ಬರುವ ಹಾಗೆ ವಾಹನವನ್ನು ಚಲಾಯಿಸಬೇಡ, ನಿಧಾನವಾಗಿ ಹೋಗು ಎಂದು ಬುದ್ಧಿವಾದ ಹೇಳಿದ್ದಕ್ಕೆ ಕಳೆದ ಶುಕ್ರವಾರ ಟಿಪ್ಪರ್‌ ಚಲಾಯಿಸಿ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪಿ ಕೋಟೆ ಬಾಗಿಲು ನಿವಾಸಿ, ಟಿಪ್ಪರ್‌ ಚಾಲಕ ಆರೀಸ್‌ ನನ್ನು ಮೂಡುಬಿದಿರೆ ಪೊಲೀಸರು ಸೋಮವಾರ ಉಲಾಯಿಬೆಟ್ಟುವಿನಲ್ಲಿ ಬಂಧಿಸಿದ್ದಾರೆ.

ಕೋಟೆಬಾಗಿಲಿನ ನಿವಾಸಿ ಫಯಾಝ್ (61) ಅವರಿಗೆ ಆರೀಸ್‌ ರಾಡ್‌ನಿಂದ ತಲೆಗೆ ಹೊಡೆದು, ಅವರು ಕೆಳಗೆ ಬಿದ್ದಾಗ ಅವರ ಮೇಲೆ ಟಪ್ಪರ್‌ ಚಲಾಯಿಸಿದ್ದು, ಬಿದ್ದ ಫಯಾಝ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭ ಮೃತಪಟ್ಟಿದ್ದರು.

ತಲೆ ಮರೆಸಿಕೊಂಡಿದ್ದ ಟಿಪ್ಪರ್‌ ಚಾಲಕ ಆರೀಸ್‌ನನ್ನು ಸೆರೆ ಹಿಡಿಯಲು ಪೊಲೀಸರು ಮೂರು ತಂಡಗಳನ್ನು ರಚಿಸಿ ಬಲೆ ಬೀಸಿದ್ದರು. ಆರೋಪಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.