ಡೈಲಿ ವಾರ್ತೆ:10 ಫೆಬ್ರವರಿ 2023

KSRTCಯ ದೇಹದಾರ್ಢ್ಯ ಪರೀಕ್ಷೆಗೆ ಕಾಲಿಗೆ ಕಬ್ಬಿಣದ ರಾಡ್ ಕಟ್ಟಿಕೊಂಡು ಬಂದು ಸಿಕ್ಕಿಬಿದ್ದ ಅಭ್ಯರ್ಥಿಗಳು

ದಾವಣಗೆರೆ:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಕಂ ನಿರ್ವಾಹಕ ನೇಮಕಾತಿಯ ದೇಹದಾರ್ಢ್ಯ ಪರೀಕ್ಷೆಗೆ ಬಂದ ಅಭ್ಯರ್ಥಿಗಳು ಕಿತಾಪತಿ ಮಾಡಿ ಸಿಕ್ಕಿಬಿದ್ದಿದ್ದಾರೆ.

ಕೆಲ ಅಭ್ಯರ್ಥಿಗಳು ನಿಗದಿತ ತೂಕ ತೋರಿಸಲು ಒಳ ಉಡುಪುಗಳಲ್ಲಿ ಕಬ್ಬಿಣದ ಕಲ್ಲು, ಕಬ್ಬಿಣದ ತುಂಡುಗಳು, ಸೈಕಲ್‌ ಚೈನ್‌ ಇರಿಸಿಕೊಂಡು ದೇಹದಾರ್ಢ್ಯ ಪರೀಕ್ಷೆಗೆ ಆಗಮಿಸಿದ್ದರು.

ಕೆಕೆಆರ್‌ಟಿಸಿಯು 1,619 ಚಾಲಕ ಕಂ ನಿರ್ವಾಹಕ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಸುಮಾರು 39 ಸಾವಿರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಸಂಸ್ಥೆಯ ಕೇಂದ್ರ ಕಚೇರಿ ಸಮೀಪ ಡಿಸೆಂಬರ್‌ನಿಂದ ದೇಹದಾರ್ಢ್ಯ ಪರೀಕ್ಷೆ ನಡೆಯುತ್ತಿದೆ.

ದೇಹದಾರ್ಢ್ಯ ಪರೀಕ್ಷೆಯಲ್ಲಿ ಅಕ್ರಮವಾಗಿ ಪಾಸಾಗಲು ಕಡಿಮೆ ತೂಕದ ಅಭ್ಯರ್ಥಿಯೊಬ್ಬ 5 ಕೆ.ಜಿ.ಯ ಕಬ್ಬಿಣದ ಕಲ್ಲನ್ನು ಒಳುಡುಪಿನಲ್ಲಿ ಇರಿಸಿಕೊಂಡಿದ್ದ. ಮತ್ತೆ ಕೆಲವರು ಕಬ್ಬಿಣ ತುಂಡುಗಳನ್ನು ತೊಡೆಗೆ, ಸೈಕಲ್‌ ಚೈನ್‌ಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಬಂದಿದ್ದರು.
ಅಧಿಕಾರಿಗಳಿಗೆ ನಡಿಗೆಯಲ್ಲಿ ಅನುಮಾನ ಬಂದು ತಪಾಸಣೆ ಮಾಡಿದಾಗ ಸುಮಾರು 5 ಅಭ್ಯರ್ಥಿಗಳು ಸಿಕ್ಕಿಬಿದ್ದಿದ್ದಾರೆ.
ಬಳಿಕ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ.