ಡೈಲಿ ವಾರ್ತೆ:15 ಫೆಬ್ರವರಿ 2023

ದಾವಣಗೆರೆ: ಅಪಘಾತದಲ್ಲಿ ಮೂವರು ಯುವಕರ ಮೃತ್ಯು; ಅದು ಅಪಘಾತವಲ್ಲ ಕೊಲೆ.!
ಕೊಲೆ ರಹಸ್ಯ ಭೇದಿಸಿದ ಪೊಲೀಸರು

ದಾವಣಗೆರೆ: ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಶುಕ್ರವಾರ (ಫೆ.11) ತಡರಾತ್ರಿ ಅಪಘಾತದಲ್ಲಿ ದಾವಣಗೆರೆ ಹೊರ ವಲಯದ ಶ್ರೀರಾಮನಗರದ ಮೂವರು ಯುವಕರು ಮೃತಪಟ್ಟಿದ್ದಾರೆ ಎಂಬ ಘಟನೆಯ ಹಿಂದಿನ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಕೊಲೆ ಮಾಡಿ ಪರಾರಿಯಾಗಿದ್ದ ಲಾರಿ ಚಾಲಕ ಹಾಗೂ ದಾವಣಗೆರೆಯ ಮೂವರು ದರೋಡೆಕೋರರನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ಲಾರಿ ಚಾಲಕ ಭೋಲೆ ಯಾದವ್ ಹಂತಕ. ದಾವಣಗೆರೆ ಗ್ರಾಮಾಂತರ, ಡಿಸಿಐಬಿ ಪೊಲೀಸರು ಚೆನ್ನೈಯಲ್ಲಿ ಲಾರಿ ಸಮೇತ ಚಾಲಕ ಹಾಗೂ ದರೋಡೆ ಮಾಡಿದ್ದ ಗಣೇಶ್, ರಾಹುಲ್, ನಾಗರಾಜ್ ಎಂಬ ಮೂವರನ್ನು ಬಂಧಿಸಿದ್ದಾರೆ.

ದರೋಡೆ ಮಾಡಿಕೊಂಡು ಹೋದ ಬೈಕ್‌ ಗಳ ಮೇಲೆ ಚಾಲಕ ಲಾರಿ ಹತ್ತಿಸಿದ್ದರ ಪರಿಣಾಮ ಒಂದು ಬೈಕ್‌ ನಲ್ಲಿ ಹೋಗುತ್ತಿದ್ದ ಪರಶುರಾಮ, ಶಿವಕುಮಾರ ಮತ್ತು ಸಂದೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನೊಂದು ಬೈಕ್‌ ನಲ್ಲಿದ್ದ ನಾಗರಾಜ, ಗಣೇಶ ಮತ್ತು ರಾಹುಲ್ ಗಾಯಗೊಂಡಿದ್ದರು.

ದಾವಣಗೆರೆ ತಾಲೂಕಿನ ಕಾಟೀಹಳ್ಳಿಯಲ್ಲಿ ಜಾತ್ರೆಯಲ್ಲಿ ಭಾಗವಹಿಸಿ ಶ್ರೀರಾಮನಗರಕ್ಕೆ ವಾಪಸ್ ಬರುವಾಗ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿತ್ತು. ಇಡೀ ಅಪಘಾತ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು.

ಡಿಸಿಐಬಿ, ಗ್ರಾಮಾಂತರ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಲಾರಿ ಚಾಲಕ ಭೋಲೆ ಯಾದವ್‌ನನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಅಪಘಾತ ಅಲ್ಲ ಕೊಲೆ ಹಾಗೂ ದರೋಡೆ ನಡೆಸಿದ್ದು ಬೆಳಕಿಗೆ ಬಂದಿದೆ. ಎಲ್ಲ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.