ಡೈಲಿ ವಾರ್ತೆ:15 ಫೆಬ್ರವರಿ 2023

ಕಾಪು: ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ ಹೊಡೆದು ಕಾರು ನಜ್ಜುಗುಜ್ಜು

ಕಾಪು : ರಾಷ್ಟ್ರೀಯ ಹೆದ್ದಾರಿ 66ರ ಉಳಿಯಾರಗೋಳಿ ದಂಡತೀರ್ಥ ಬಳಿ ಟೂರಿಸ್ಟ್‌ ಕಾರಿಗೆ ಸರಕಾರಿ ವೋಲ್ವೋ ಬಸ್‌ ಢಿಕ್ಕಿ ಹೊಡೆದು ಪ್ರಯಾಣಿಕ ಗಾಯಗೊಂಡ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಉಡುಪಿಯಿಂದ ಕಾಪುವಿಗೆ ಬರುತ್ತಿದ್ದ ಕಾರಿಗೆ ಮಂಗಳೂರಿಗೆ ತೆರಳುತ್ತಿದ್ದ ಬಸ್‌ ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದ್ದು ಭಟ್ಕಳ ಮೂಲದ ಮಾಸ್ತಪ್ಪ ಎಂಬವರು ಗಾಯಗೊಂಡಿದ್ದಾರೆ.

ಬೆನ್ನಟ್ಟಿದ ಕಾರಿಗೆ ಬಸ್‌ ಢಿಕ್ಕಿ
ಭಟ್ಕಳದಿಂದ ಮಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ವೋಲ್ವೋ ಬಸ್‌ನಲ್ಲಿ ಉಡುಪಿವರೆಗೆ ಆಗಮಿಸಿದ್ದ ಪ್ರಯಾಣಿಕರು, ಉಡುಪಿಯಲ್ಲಿ ಬಸ್‌ ಇಳಿದು ನೋಡಿದಾಗ ಅವರ ಅಮೂಲ್ಯ ವಸ್ತುವೊಂದು ಕಳೆದು ಹೋಗಿತ್ತು. ತತ್‌ಕ್ಷಣ ಅಲ್ಲೇ ನಿಲ್ದಾಣದಲ್ಲಿ ಟೂರಿಸ್ಟ್‌ ಕಾರ್‌ವೊಂದನ್ನು ಗೊತ್ತುಪಡಿಸಿ ಬಸ್‌ನ್ನು ಹುಡುಕುತ್ತಾ ಬಂದಿದ್ದು ದಂಡತೀರ್ಥ ಶಾಲೆ ಬಳಿ ಬಸ್‌ನ್ನು ಪತ್ತೆ ಹಚ್ಚಿ, ಕಾರನ್ನು ಮುಂದೆ ತಂದು ಬಸ್‌ ನಿಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಅಷ್ಟರಲ್ಲೇ ಬಸ್‌ ಚಾಲಕ ಕಾರಿನ ಹಿಂಬದಿಗೆ ಗುದ್ದಿದ್ದು ಕಾರಿನ ಹಿಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಈ ವೇಳೆ ಕಾರಿನಲ್ಲಿದ್ದ ಪ್ರಯಾಣಿಕ ಮಾಸ್ತಪ್ಪ ಅವರಿಗೆ ಗಾಯಗಳುಂಟಾಗಿದ್ದು ಅವರನ್ನು ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.