ಡೈಲಿ ವಾರ್ತೆ:16 ಫೆಬ್ರವರಿ 2023

ಬೈಕ್ ಹಾಗೂ ಕಾರು ಅಪಘಾತ : ಅಣ್ಣ-ತಮ್ಮ ಮೃತ್ಯು

ಬೆಳಗಾವಿ: ಕಾರೊಂದು ಬೈಕ್ ‘ಗೆ ಡಿಕ್ಕಿಯಾದ ಪರಿಣಾಮ ಅಣ್ಣ-ತಮ್ಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಚಿಕ್ಕೋಡಿ ತಾಲೂಕಿನ ಬೆಳಕೂಡ ಗೇಟ್ ಬಳಿ ಸಂಭವಿಸಿದೆ.

ಚಿಕ್ಕೋಡಿ ತಾಲೂಕಿನ ನವಳಿಹಾಳ ಗ್ರಾಮದ ಶಿವಕುಮಾರ ರಾಜು ಘೋಷೆ (25), ಸಹೋದರ ಅಶ್ವಿನ್ ಕುಮಾರ್ ರಾಜು ಘೋಷೆ (23) ಮೃತಪಟ್ಟವರು.

ಇಬ್ಬರು ಸ್ವಗ್ರಾಮದಿಂದ ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಎಂಬ ಗ್ರಾಮದ ಕಡೆಗೆ ಹೊರಟ್ಟಿದ್ದರು. ಕಾರು ಕಬ್ಬೂರು ಗ್ರಾಮದ ಕಡೆಯಿಂದ ಬರುತ್ತಿತ್ತು. ಬೆಳಕೂಡ ಗೇಟ್ ಬಳಿ ಕಾರು ಚಾಲಕ ಮುಂದೆ ಇದ್ದ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಎದುರುಗಡೆ ಬರುತ್ತಿದ್ದ ಬೈಕ್’ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ತಿಳಿದುಬಂದಿದೆ.

ಬಳಿಕ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು, ಈ ಕುರಿತಂತೆ ಚಿಕ್ಕೋಡಿ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.