ಡೈಲಿ ವಾರ್ತೆ:16 ಫೆಬ್ರವರಿ 2023

ಸಿದ್ದರಾಮಯ್ಯರಿಗೆ ಬೆದರಿಕೆ: ಅಶ್ವತ್ಥ್ ನಾರಾಯಣ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ: ಪೊಲೀಸರಿಂದ ಬಂಧನ

ಬೆಂಗಳೂರು; ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ ಹಾಕಿರುವ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ್ ನಾರಾಯಣ್ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸದಾಶಿವ ನಗರದ ಭಾಷ್ಯಂ ಸರ್ಕಲ್ ನಲ್ಲಿ ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್, ಮಾಜಿ ಮೇಯರ್ ಹುಚ್ಚಪ್ಪ, ಕಾಂಗ್ರೆಸ್ ಮುಖಂಡರಾದ ಶ್ರೀಪಾದ್ ರೇಣು ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಅಶ್ವತ್ಥ್ ನಾರಾಯಣ್ ಅವರ ವಿರುದ್ಧ ಪೊಲೀಸರು ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನಕಾರರು ಧಿಕ್ಕಾರದ ಫಲಕಗಳನ್ನು ಹಿಡಿದು ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ವಯ್ಯಾಲಿ ಕಾವಲ್ ಪೊಲೀಸ್ ಠಾಣೆಗೆ ಕರೆದೊಯ್ದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಒಬಿಸಿ ವಿಭಾಗದ ಉಪಾಧ್ಯಕ್ಷ ಮಂಜು, ಪಕ್ಷದ ಮುಖಂಡರಾದ, ಗೋಪಿ, ಶಿವು, ಪ್ರಭಾಕರ್, ಲಕ್ಷ್ಮೀ ಮೂರ್ತಿ, ಸುಗಂಧ ಮತ್ತಿತರರು ಉಪಸ್ಥಿತರಿದ್ದರು.