ಡೈಲಿ ವಾರ್ತೆ:20 ಫೆಬ್ರವರಿ 2023

ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಜೆ.ಪಿ.ನಡ್ಡಾ

ಉಡುಪಿ : ಬೂತ್ ಸಮಿತಿಯ ಸಮಾವೇಶದ ಹಿನ್ನೆಲೆಯಲ್ಲಿ ಫೆ. 20 ರಂದು ಉಡುಪಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದರು. ಮಠಕ್ಕೆ ಆಗಮಿಸಿದ ನಡ್ಡಾ ಅವರನ್ನು ಮಠದ ದಿವಾನ ವರದರಾಜ ಆಚಾರ್ಯ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.

ಶ್ರೀ ಕೃಷ್ಣ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಪೇಜಾವರ ಮಠಕ್ಕೆ ತೆರಳಿದ ನಡ್ಡಾ ಅವರು ಅಷ್ಟಮಠಾಧೀಶರು ಹಾಗೂ ಕರಾವಳಿ ಭಾಗದ ವಿವಿಧ ಮಠಾಧೀಶರೊಂದಿಗೆ ಮಾತುಕತೆ ನಡೆಸಿದರು. ಕರಾವಳಿ ಭಾಗದ ಹತ್ತಕ್ಕೂ ಅಧಿಕ ಮಠಾಧೀಶರು, ಹಿಂದು ಸಮುದಾಯದ ಮುಖಂಡರು ಭಾಗಿಯಾಗಿದ್ದು ಕರಾವಳಿ ಭಾಗದ ಬೇಡಿಕೆಗಳ ಕುರಿತು ಸಮಾಲೋಚನೆ ನಡೆಸಿದರು.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕಿ ಮಚೀಂದ್ರ ಅವರ ನೇತೃತ್ವದಲ್ಲಿ ಭದ್ರತೆ ವಹಿಸಲಾಗಿತ್ತು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಸಿ. ಟಿ. ರವಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವ ಸುನಿಲ್ ಕುಮಾರ್, ಶಾಸಕ ಕೆ. ರಘುಪತಿ ಭಟ್ ಮುಖಂಡರಾದ ಪ್ರದೀಪ ರಾವ್, ಸುಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.