ಡೈಲಿ ವಾರ್ತೆ:20 ಫೆಬ್ರವರಿ 2023

ಕಾರು ಹಾಗೂ ಲಾರಿ ನಡುವೆ ಭೀಕರ ರಸ್ತೆ ಅಪಘಾತ: ಇಬ್ಬರು ಯುವಕರು ಮೃತ್ಯು, ಮೂವರಿಗೆ ಗಾಯ!

ಮಂಡ್ಯ: ಮದ್ದೂರು ತಾಲೂಕು ಗೆಜ್ಜಲಗೆರೆ ಬಳಿ ಮೈಸೂರು ಬೆಂಗಳೂರು ಹೆದ್ದಾರಿಯಲ್ಲಿ ಸೋಮವಾರ ಬೆಳಗಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಗರದ ಇಬ್ಬರು ಯುವಕರು ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.

ನಗರದ ಗುತ್ತಲು ಬಡಾವಣೆಯ ನಿವಾಸಿಗಳಾದ ಸದ್ದಾಂ ಷರೀಫ್ (23), ಕಾರಿನ ಚಾಲಕ ಶಾಕಿಬ್ ಅಪಘಾತದಲ್ಲಿ ಮೃತಪಟ್ಟಿದ್ದು, ಗಾಯಗೊಂಡಿರುವ ಸದ್ದಾಂ ಷರೀಫ್ ಕುಟುಂಬದ ನಸೀರಾ(24), ನಿಖತ್(20) ಹಾಗೂ ಝಹೀರ್(26) ಅವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಸದ್ದಾಂ ಷರೀಫ್ ಸಂಬಂಧಿಕರ ಬೀಗರ ಔತಣಕೂಟಕ್ಕೆ ಬೆಂಗಳೂರಿಗೆ ಕಾರಿನಲ್ಲಿ ಹೋಗಿ ರಾತ್ರಿ ವಾಪಸ್ ಬರುವಾಗ ಗೆಜ್ಜಲಗೆರೆ ಬಳಿ ಮುಂದೆ ಹೋಗುತ್ತಿದ್ದ ಲಾರಿಗೆ ಕಾರು ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ತೀವ್ರವಾಗಿ ಗಾಯಗೊಂಡಿದ್ದವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಸದ್ದಾಂ ಹಾಗೂ ಶಾಕಿಬ್ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಮದ್ದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.