ಡೈಲಿ ವಾರ್ತೆ:27 ಫೆಬ್ರವರಿ 2023

ದೇವನಹಳ್ಳಿ: ವಾಟರ್ ಹೀಟರ್ನಿಂದ ವಿದ್ಯುತ್ ಪ್ರವಹಿಸಿ ತಾಯಿ, 4 ವರ್ಷದ ಮಗು ಸಾವು

ಬೆಂಗಳೂರು: ಬಕೆಟ್’ನಲ್ಲಿ ಹಾಕಿದ್ದ ವಾಟರ್ ಹೀಟರ್’ನಿಂದ ವಿದ್ಯುತ್ ಪ್ರವಹಿಸಿ ತಾಯಿ- ಮಗು ಇಬ್ಬರೂ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ನಡೆದಿದೆ.

ರಾಯಚೂರು ಮೂಲದ ತಾಯಿ ಜ್ಯೋತಿ ಹಾಗೂ ಮಗ ಜಯಾನಂದ್(4) ಮೃತಪಟ್ಟವರು.

ಜ್ಯೋತಿ ಅವರು ನಿನ್ನೆ ಮಧ್ಯಾಹ್ನ ಶೌಚಾಲಯದಲ್ಲಿ ನೀರು ಕಾಯಿಸಲು ಬಕೆಟ್’ನಲ್ಲಿ ಹೀಟರ್ ಹಾಕಿದ್ದಾಗ ಶೌಚಾಲಯಕ್ಕೆ ಬಾಲಕ ಹೋಗಿದ್ದು ಹೀಟರನ್ನು ಮೈಮೇಲೆ ಬೀಳಿಸಿಕೊಂಡಿದ್ದಾನೆ. ಇದರಿಂದ ವಿದ್ಯುತ್ ಪ್ರವಹಿಸಿ ಒದ್ದಾಡುತ್ತಿದ್ದ ಮಗನನ್ನು ರಕ್ಷಿಸಲು ಹೋದ ತಾಯಿಗೂ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ.

ಮೃತ ಜ್ಯೋತಿ ಹಾಗೂ ಅವರ ಪತಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು ನಿನ್ನೆ ಜ್ಯೋತಿ ಕೆಲಸಕ್ಕೆ ಹೋಗಿರಲಿಲ್ಲ. ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಹೊಸಕೋಟೆ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.