ಡೈಲಿ ವಾರ್ತೆ:28 ಫೆಬ್ರವರಿ 2023

ಕೋಟತಟ್ಟು ಗ್ರಾಮಸಭೆ: ಸಭೆಗೆ ಪರಿಸರ ಇಲಾಖಾಧಿಕಾರಿಗಳು ಗೈರು, ಗ್ರಾಮಸ್ಥರ ಆಕ್ರೋಶ, ಮಾರ್ಚ್ 9 ರಂದು ವಿಶೇಷ ಗ್ರಾಮ ಸಭೆಗೆ ತೀರ್ಮಾನ!

ಕೋಟ: ಕೋಟತಟ್ಟು ಗ್ರಾಮಸಭೆ ಫೆ. 28 ರಂದು ಮಂಗಳವಾರ ಹಂದಟ್ಟು ಗೆಳೆಯರ ಬಳಗ ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ ವಹಿಸಿದ್ದರು.

ಕೋಟತಟ್ಟು ವ್ಯಾಪ್ತಿ ಗ್ರೀನ್ ಝೋನ್ ನಿಂದ ರೆಡ್ ಝೋನ್ ಆಗುತ್ತಿದೆ ಇದಕ್ಕೆ ಈ ಬಗ್ಗೆ ಗ್ರಾಮಸ್ಥರಿಗೆ ಪರಿಸರ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಕೆಲವೊಂದು ಮಾಹಿತಿ ಪಡೆಯಬೇಕಾಗಿದೆ ಅಧಿಕಾರಿಗಳು ಗ್ರಾಮಸಭೆಯಲ್ಲಿ ಅನುಪಸ್ಥಿತಿಗೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ಗ್ರಾಮಸಭೆಯನ್ನು ಮುಂದೂಡುವಂತೆ ಪಟ್ಡುಹಿಡಿದರು. ಈ ಬಗ್ಗೆ ಪಂಚಾಯತ ಅಭಿವೃದ್ಧಿ ಅಧಿಕಾರಿ ನಕಾರ ವ್ಯಕ್ತಪಡಿಸಿ ಪರಿಸರ ಇಲಾಖೆಯವರಿಗೆ ನಿಗದಿಯಾದ ಕಾರ್ಯ ಇದೆ ಮುಂದಿನ ದಿನಗಳಲ್ಲಿ ವಿಶೇಷ ಗ್ರಾಮಸಭೆ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನಿಸಲಾಗುವುದು ಎಂದು ಸಭೆಯನ್ನು ಮುಂದುವರೆಸಿದರು.

ಸುರುಮಿ ಮೀನುಸಂಸ್ಕರಣಾ ಘಟಕಕ್ಕೆ ಭಾರಿ ವಿರೋಧ:
ಗ್ರಾಮಸಭೆಯಲ್ಲಿ ಕೋಟತಟ್ಟು ಪಡುಕರೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸುರುಮಿ ಮೀನು ಸಂಸ್ಕರಣಾ ಘಟಕಕ್ಕೆ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸದೆ ಎನ್ ಓಸಿ ನೀಡಲಾಗಿದೆ. ನಮ್ಮ ಈ ಭಾಗ ಗ್ರೀನ್ ಝೋನ್ ನಿಂದ ರೆಡ್ ಝೋನ್ ಗೆ ಕೊಂಡ್ಯೊಯುವ ಹುನ್ನಾರಕ್ಕೆ ಗ್ರಾಮಪಂಚಾಯತ್ ಪ್ರಚೋದಿಸುತ್ತಿದೆ. ಈ ಬಗ್ಗೆ ಗ್ರಾಮಸ್ಞರು ಆಕ್ರೋಶ ಹೊರಹಾಕಿ ಗೌಜೆಬ್ಬಿಸಿದರು. ಈ ಬಗ್ಗೆ ಪಂಚಾಯತ್ ಅಧ್ಯಕ್ಷರು ಸಮರ್ಪಕವಾಗಿ ಉತ್ತರಿಸಬೇಕು ಇಲ್ಲವಾದಲ್ಲಿ‌ ಧರಣಿ ಕೂರುವುದಾಗಿ ಎಚ್ಚರಿಸಿದರು. ಈ ಬಗ್ಗೆ ಉತ್ತರಿಸಿದ ಪಂಚಾಯತ್ ಅಧ್ಯಕ್ಷರು ನಾನು‌ಸಾಮಾನ್ಯ ಸಭೆಯಲ್ಲಿ ಸಹಿ ಹಾಕಿಲ್ಲ ಅಲ್ಲದೆ ನನ್ನ ಜೊತೆ ಇನ್ನೂ ಮೂವರು ಸಹಿ ಹಾಕಿಲ್ಲ ಎಂದು ಉತ್ತರಿಸಿದಾಗ ಸಭೆ ಮತ್ತಷ್ಟು ಆಕ್ರೋಶಿತಗೊಂಡು ಅಧ್ಯಕ್ಷರ ಒಪ್ಪಿಗೆ ಇಲ್ಲದೆ ಹೇಗೆ ಲೈಸನ್ಸ್ ನೀಡಿದ್ದಿರಿ ಇದು ಗ್ರಾಮಪಂಚಾಯತೋ ಅಥವಾ ಜನರ ಜೀವದ ಜೊತೆ ಚಲ್ಲಾಟ ಆಡುವ ರಾಕ್ಷರಸರೋ ಎಂದು ಗ್ರಾಮಸ್ಥರೊಬ್ಬರು ಗುಡುಗಿದರು. ಈ ಹಿನ್ನಲ್ಲೆ ಗ್ರಾಮಸಭೆ ಮೂರು ತಾಸು ಗದ್ದಲದಲ್ಲಿ ಮುಳುಗಿ ಹೊಯಿತು.
ನಂತರ ಮಧ್ಯಪ್ರವೇಶಿದರ ಕೋಟ ಠಾಣಾಧಿಕಾರಿ ಮಧು ಬಿ.ಇ ಗ್ರಾಮಸಭೆ ನಿಮ್ಮಗಾಗಿಯೇ ಇರುವುದು ಸ್ವಲ್ಪ ತಾಳ್ಮೆಯಿಂದ ಪ್ರಶ್ನಿಸಿ ಎಂದು ಸಮಾಧಾನ ಪಡಿಸಿದರು.

ಈ ವೇಳೆ ಗ್ರಾಮಸ್ಥರು ಲೈಸೆನ್ಸ್ ರದ್ದುಗೊಳಿಸಿ ನಿರ್ಮಾಣ ಹಂತದಲ್ಲಿರುವ ನವೀಕೃತ ಕಟ್ಟಡಕ್ಕೆ ತಡೆಹಿಡಿದು ಕಾಮಗಾರಿ ನಿಲ್ಲಿಸಿ ನಿರ್ಣಯ ಕೈಗೊಳ್ಳಿ ಎಂದು ಆಗ್ರಹಿಸಿದರು. ಈ ಬಗ್ಗೆ ಪಿ.ಡಿ‌.ಓ ರವೀಂದ್ರ ರಾವ್ ಲೈಸನ್ಸ್ ರದ್ದುಗೊಳಿಸಿ, ಕಟ್ಟಡ ನವೀಕರಿಸದಂತೆ ನೋಟಿಸ್ ಜಾರಿಗೊಳಿಸಲಾಗುವ ಕುರಿತು ನಿರ್ಣಯ ಕೈಗೊಳ್ಳಲಿದೆ ಎಂದು ಉತ್ತರಿಸಿ ಸಭೆ ಮುಂದುವರೆಸಲು‌ ಅನುಮತಿ ಕೋರಿದರು.

ಸಿಆರ್ ಝಡ್ ವ್ಯಾಪ್ತಿಯಲ್ಲಿ ಅಲ್ಲೆ ಮೊದಲಿನಿಂದ ಕೆಲವಾರು ಮನೆಗಳು ವಾಸ್ತವ್ಯವಿದ್ದು ಅಂತಹ ಮನೆಗಳಿಗೆ ಡೋರ್ ನಂ. ನೀಡುವಂತೆ ಗ್ರಾಮಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಎಂದು ಸಾಮಾಜಿಕ‌ಕಾರ್ಯಕರ್ತ ದಿನೇಶ್ ಗಾಣಿಗ ಮನವಿ ಮಾಡಿದರು. ಈ‌ ಬಗ್ಗೆ ಸೂಕ್ಷವಾಗಿ ಅವಲೋಕಿಸಿ ಕಾನೂನಾತ್ಮಕ ಅಂಶಗಳ ಮಾಹಿತಿ ಪಡೆದು ನಿರ್ಧಾರ ಕೈಗೊಳ್ಳಲಾಗುದು ಪಂಚಾಯತ್ ತಿಳಿಸಿತು.
ಕೋಟತಟ್ಟು ಗ್ರಾಮಸಭೆಯಲ್ಲಿ ನಿರ್ಣಯಗೊಂಡ ಹೆಚ್ಚಿನ ಕಾರ್ಯಗಳ ವಿಷಯಗಳು‌ ಕಾರ್ಯರೂಪಕ್ಕೆ ಬರುತ್ತಿಲ್ಲ ಕೋಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ‌ ರಾತ್ರಿ ಸಮಯದಲ್ಲಿ ಹೆರಿಗೆ ವೈದ್ಯರಿಲ್ಲ, ವಾಚ್ ಮೇನ್ ಇಲ್ಲ ಇದೊಂದು ಮಾದರಿ ಸಮುದಾಯ ಆರೋಗ್ಯ ಕೇಂದ್ರವಾದರೂ ಈ ಬಗ್ಗೆ ಈವರೆಗೆ ಯಾವುದೇ ಅನುಷ್ಠಾನಗೊಂಡಿಲ್ಲ, ಕೋಟತಟ್ಟು ಹೋಗಿ ಕೋಡತಟ್ಟು ಆಗಿ ಸಾಕಷ್ಟು ಸಮಯಗಳಾಗಿ ಅದು ಅನುಷ್ಠಾನಕ್ಕೆ ಬರಲಿಲ್ಲ ಹಾಗಾದರೆ ನಿರ್ಣಯಗೊಂಡ ವಿಚಾರಗಳು ಮೂಲೆಗುಂಪಾಗುತ್ತಿದೆಯಾ ಎಂದು ಪ್ರಶ್ನಿಸಿದರು. ಈ ಬಗ್ಗೆ ಈಗಾಗಲೇ ಜಿಲ್ಲಾ ಆರೋಗ್ಯ ನಿರೀಕ್ಷರಿಗೆ ತಿಳಿಸಲಾಗಿದೆ ಎಂದು ಕೋಟ ಸಮುದಾಯ ಆರೋಗ್ಯಕೇಂದ್ರದ ವೈದ್ಯಾಧಿಕಾರಿ ಡಾ. ವಿಶ್ವನಾಥ್ ತಿಳಿಸಿದರು.
ಕೋಡತಟ್ಟು ತಂತ್ರಾಂಶದ ಕುರಿತಂತೆ ಪಂಚಾಯತ್ ಕಾರ್ಯಪ್ರವೃತವಾಗಿದೆ ಸಮಯ ತೆಗೆದುಕೊಳ್ಳುತ್ತದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉತ್ತರಿಸಿದರು.
ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕಂಡಕಂಡಲ್ಲಿ ಎಸೆಯುವ ಹಾಗೂ ವ್ಯವಹಾರಿಕ‌ ಕೇಂದ್ರಗಳ‌ಲ್ಲಿ ಹೊರಗೆ ಎಸೆಯಲಾಗುತ್ತಿದೆ ಈ ಬಗ್ಗೆ ಪಂಚಾಯತ್ ನಿರ್ಲಕ್ಷ್ಯ ತೊರಯತ್ತಿದೆ ಎಂದು ಗ್ರಾಮಸ್ಥರೊರ್ವರು ಪಂಚಾಯತ್ ಅನ್ನು‌ಪ್ರಶ್ನಿಸಿದರು. ವ್ಯವಹಾರಿಕಾ ಕೇಂದ್ರಕ್ಕೆ ಈಗಾಗಲೇ ಭೇಟಿ ನೀಡಿ ಪರಿಶೀಲಿಸಲಾಗಿದೆ. ಸ್ವಚ್ಛತೆಯ ಬಗ್ಗೆ ವಿಶೇಷ ಕಾಳಜಿ ಪಂಚಾಯತ್ ವಹಿಸಲಿದೆ ಎಂದು ಅಭಿವೃದ್ಧಿ ಅಧಿಕಾರಿ ತಿಳಿಸಿದರು.

ಸ್ಥಳೀಯ ಮೀನು ಸಂಸ್ಕರಣಾ ಕಾರ್ಖಾನೆಗಳಲ್ಲಿ ನೀರನ್ನು ರಾತ್ರಿ ಸಮಯದಲ್ಲಿ ಸಮುದ್ರಕ್ಕೆ ಬಿಡಲಾಗುತ್ತಿದೆ ಈ ಬಗ್ಗೆ ಸಿ ಆರ್ ಝಡ್ ಇಲಾಖೆ ಸ್ಥಳಕ್ಕೆ ಬೇಟಿ ನೀಡಿ ಸಮರ್ಪಕ ಇಟಿಪಿ ನಿರ್ವಹಿಸಿ ನೀರು ಬಿಡುವ ಪ್ರಕ್ರಿಯೆಗೆ ನಿರ್ದೇಶ ನೀಡಲು ಶ್ರೀನಿವಾಸ್ ಪುತ್ರನ್ ಪಂಚಾಯತ್ ಗೆ ಮನವಿ ಮಾಡಿದರು ಈ ಬಗ್ಗೆ ಸಿಆರ್ ಝಡ್ ಇಲಾಖೆ ಸ್ಥಳ ಪರಿಶೀಲಿಸಿ ಸಮರ್ಪಕ ಇಟಿಪಿ ರಚಿಸಿ ಬೂದು ನೀರು ನಿರ್ವಹಣೆಗೆ ನಿರ್ದೇಶನ ನೀಡಲಾಗಿದೆ ಎಂದು ಉತ್ತರಿಸಿದರು.

  • ಕೋಟತಟ್ಟು ಪಡುಕರೆ ಸಾರ್ವಜನಿಕ ಸಂಚಾರಿ ರಸ್ತೆ ಕಬಳಿಸಿದ ಆರೋಪ:
  • ಗ್ರಾಮ ಸಭೆಯಲ್ಲಿ ಕೋಟತಟ್ಟು  ಪಡುಕೆರೆಯ ಸಾರ್ವಜನಿಕ ಸಂಚಾರಿ ರಸ್ತೆಯನ್ನು  ಕಬಳಿಸಿದ್ದಾರೆ ಎಂದು ಆರೋಪಿಸಿ ಕೋಟತಟ್ಟು ನಿವಾಸಿ ರತ್ನಾಕರ ಶ್ರೀಯಾನ್ ಅವರು ದಾಖಲೆ ಸಹಿತ ಬ್ಯಾನರ್ ಹಿಡಿದು ವೇದಿಕೆಯ ಮುಂಭಾಗ ಹಿಂದಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿರುದ್ದ ದಿಕ್ಕಾರ ಕೂಗಿ ಪ್ರತಿಭಟಿಸಿದ ಪ್ರಸಂಗ ನಡೆಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ,
ಗ್ರಾಮಸಭೆಯ ನೋಡೆಲ್ ಅಧಿಕಾರಿ ಮಂಜುನಾಥ್ ಅಡಿಗ, ಮೀನುಗಾರಿಕ ಇಲಾಖಾಧಿಕಾರಿ ದಿವಾಕರ್, ಸಿಆರ್ ಝಡ್ ಇಲಾಖಾಧಿಕಾರಿ ಸವಿತಾ, ಕೋಟ ವೈದ್ಯಧಿಕಾರಿ ಡಾ. ವಿಶ್ವನಾಥ್, ಕೋಟ ಆರಕ್ಷಕ ಠಾಣಾಧಿಕಾರಿ ಮಧು ಬಿಇ, ಸಣ್ಣ ಕೈಗಾರಿಕಾಧಿಕಾರಿ ಸತೀಶ್, ಕೃಷಿ ಇಲಾಖಾಧಿಕಾರಿ ಸುರೇಶ್, ಗ್ರಾಮ ಆಡಳಿತ ಅಧಿಕಾರಿ ಚಲುವರಾಜ್, ಮೆಸ್ಕಾಂ ಅಧಿಕಾರಿ ಪ್ರತಾಪ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಮೀನಾಕ್ಷಿ ಮೇಲ್ವಿಚಾರಕರು, ತೋಟಗಾರಿಕಾ ಇಲಾಖಾಧಿಕಾರಿ ಪವಿತ್ರ, ಪಂಚಾಯತ್ ಸದಸ್ಯರಾದ ಸತೀಶ್ ಕುಂದರ್, ಪ್ರಕಾಶ್ ಎಚ್., ರವೀಂದ್ರ ತಿಂಗಳಾಯ, ರಾಬರ್ಟ್ ರೋಡ್ರಿಗರ್ಸ್, ಪ್ರಮೋದ್ ಹಂದೆ, ಸರಸ್ವತಿ, ಪೂಜಾ, ಜ್ಯೋತಿ, ಸಾಯಿರಾ ಬಾನು, ವಿದ್ಯಾಶ್ರೀ, ಸೀತಾ
ಹಾಗೂ ಆಶಾ ಕಾರ್ಯಕರ್ತೆಯರು, ಮತ್ತು ಸಂಘ ಸಂಸ್ಥೆಯ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.