ಡೈಲಿ ವಾರ್ತೆ:01 ಮಾರ್ಚ್ 2023

ಪಾಗಲ್ ಪ್ರೇಮಿಯು ತನ್ನ ಪ್ರೇಯಸಿಯನ್ನು 10ಕ್ಕೂ ಹೆಚ್ಚು ಬಾರಿ ಇರಿದು ಬರ್ಬರವಾಗಿ ಕೊಲೆ

ಬೆಂಗಳೂರು: ಪಾಗಲ್‌ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಚಾಕುವಿನಿಂದ 10ಕ್ಕೂ ಅಧಿಕ ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜೀವನಭೀಮಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅನ್ಯ ಜಾತಿಯ ಕಾರಣಕ್ಕೆ ಪ್ರೇಯಸಿಯ ಪೋಷಕರು ವಿವಾಹ ಮಾಡಿಕೊಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಈ ದುಷ್ಕೃತ್ಯ ಎಸಗಿದ್ದಾನೆ. ಆಂಧ್ರಪ್ರದೇಶದ ಕಾಕಿನಾಡ ಮೂಲದ ಲೀಲಾ ಪವಿತ್ರಾ (25) ಕೊಲೆಯಾದ ದುರ್ದೈವಿ. ಆರೋಪಿ ಆಂಧ್ರಪ್ರದೇಶದ ಶ್ರೀಕಾಕುಲಂ ಮೂಲದ ದಿನಕರ್‌ (21) ಎಂಬಾತನನ್ನು ಬಂಧಿಸಲಾಗಿದೆ.

ಮಂಗಳವಾರ ರಾತ್ರಿ 7.30ರ ಸುಮಾರಿಗೆ ಮುರುಗೇಶ ಪಾಳ್ಯದ ಒಮೆಗಾ ಹೆಲ್ತ್‌ಕೇರ್‌ ಕಂಪನಿಯ ಕಚೇರಿಯ ಎದುರು ಈ ದುರ್ಘ‌ಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊಲೆಯಾದ ಲೀಲಾ ಪವಿತ್ರ ಮತ್ತು ಆರೋಪಿ ದಿನಕರ್‌ ಆಂಧ್ರಪ್ರದೇಶ ಮೂಲದವರು. ಲೀಲಾ ಪವಿತ್ರ ಎಂಎಸ್ಸಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡಿದ್ದಾಳೆ. ನಗರದ ಮುರುಗೇಶ ಪಾಳ್ಯದ ಒಮೆಗಾ ಹೆಲ್ತ್‌ಕೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿ ದಿನಕರ್‌ ದೊಮ್ಮಲೂರಿನ ಲೋಗಿಸ್‌ ಹೆಲ್ತ್‌ಕೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಕಳೆದ ಐದು ವರ್ಷಗಳಿಂದ ಈ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಲೀಲಾ ಪವಿತ್ರ ಹಾಗೂ ಆರೋಪಿ ದಿನಕರ್‌ ಜಾತಿ ಬೇರೆ ಬೇರೆಯಾಗಿದ್ದರಿಂದ ಲೀಲಾ ಪವಿತ್ರಾ ಪೋಷಕರು ಮದುವೆಗೆ ನಿರಾಕರಿಸಿದ್ದರು. ಹೀಗಾಗಿ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಘಟನೆ ಸಂಬಂಧ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ಈ ಸಂಬಂಧ ಜೀವನಭೀಮಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.