ಡೈಲಿ ವಾರ್ತೆ:03 ಮಾರ್ಚ್ 2023

ಜನ್ಸಾಲೆ ಬದ್ರಿಯಾ ಜುಮ್ಮಾ ಮಸೀದಿ ಉದ್ಘಾಟನೆ: ಜನ್ಸಾಲೆಯಲ್ಲಿ ಸೌಹಾರ್ದ ಸಂಗಮ! ‘ಸೂರ್ಯಚಂದ್ರ ಇರುವ ತನಕ ಎಲ್ಲಾ ಧರ್ಮದವರು ಒಂದಾಗಿ ಬಾಳುವ: ಸಚ್ಚಿದಾನಂದ ಛಾತ್ರ’

ಕುಂದಾಪುರ: ಸೂರ್ಯಚಂದ್ರ ಇರುವ ತನಕ ಯಾವುದೇ ವೈಮನಸ್ಸು, ಜಾತಿ, ಧರ್ಮ ಎಲ್ಲೇ ಮೀರಿ ಬದುಕೋಣ ಎಂದು ಕಮಲಶಿಲೆ ದೇವಸ್ಥಾನದ ಆಡಳಿತ ಮೊಕ್ತೇಸರ ಸಚ್ಚಿದಾನಂದ ಛಾತ್ರ ಹೇಳಿದರು.
ಕುಂದಾಪುರ ತಾಲೂಕಿನ ಸಿದ್ಧಾಪುರದಲ್ಲಿ ಬದ್ರಿಯಾ ಜುಮ್ಮಾ‌ ಮಸೀದಿ ಜನ್ಸಾಲೆ ಇದರ ನವೀಕೃತ ಮಸೀದಿಯ ಉದ್ಘಾಟನೆ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮದಲ್ಲಿ ಸೌಹಾರ್ದ ಭಾಷಣದಲ್ಲಿ ಅವರು ಮಾತನಾಡಿ ಎಲ್ಲಾ ಧರ್ಮಗಳ ಸಂದೇಶವೂ ಒಂದೇ ಆಗಿದೆ.‌ ಹಿಂದೂ ದೇವಾಲಯಗಳಿಗೆ ದೇಣಿಗೆ ನೀಡಿದ ಎಷ್ಟೂ ಮುಸ್ಲಿಮರು, ಕ್ರೈಸ್ತರೂ ಇದ್ದಾರೆ. ಜೊತೆಯಾಗಿ ಸಾಗಿದಾಗ ಬದುಕು ಸಂಭ್ರಮಿಸುತ್ತದೆ ಎಂದು ಹೇಳಿದರು.

ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯ ಕ್ಷೇತ್ರದ ಪಾ. ಸುನಿಲ್ ವೇಗಸ್ ಮಾತನಾಡಿ, ನಮ್ಮಲ್ಲಿ ಸೌಹಾರ್ಧತೆಗೆ ಕೊರತೆಯಿಲ್ಲ. ಆದರೆ ಸಂಕುಚಿತ ಮನೋಭಾವನೆ ಹಾಗೂ ಸ್ವಾರ್ಥದಿಂದಾಗಿ ಸೌಹಾರ್ದತೆ ಕಡಿಮೆಯಾಗುತ್ತಿದೆ. ಎಲ್ಲರ ಬದುಕಿನ ಕ್ಷೇಮ, ಅಭಿವೃದ್ಧಿ ಸೌಹಾರ್ದತೆಯ ಉದ್ದೇಶವಾಗಿದೆ. ವಿಶಾಲ ಮನೋಭಾವನೆಯಿಂದ ಬದುಕುವ ಗುಣ ರೂಡಿಸಿಕೊಳ್ಳಬೇಕು. ಚುನಾವಣೆ ಸಮಯದಲ್ಲಿ ಜಾತಿ, ಧರ್ಮ ಬಂದು ದ್ವೇಷ ಬಿತ್ತುವ ಕಾರ್ಯ ನಡೆಯುತ್ತದೆ. ಯಾರದ್ದೋ ಸ್ವಾರ್ಥಕ್ಕಾಗಿ ಪ್ರಚೋದನೆಗೆ ಬಲಿಯಾಗಬಾರದು ಎಂದವರು ಕರೆಕೊಟ್ಟರು.

ಜನ್ಸಾಲೆ ಬದ್ರಿಯಾ ಜಾಮೀಯಾ ಮಸೀದಿ ಅಧ್ಯಕ್ಷ ಅಬ್ದುಲ್ ಮುನೀರ್ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದು, ಮಸೀದಿ ಸಾಗಿಬಂದ ಹಾದಿ. ನವೀಕರಣಕ್ಕೆ ದಾನಿಗಳ ಸಹಕಾರದ ಜೊತೆಗೆ ಸರ್ವಧರ್ಮದವರು ನೀಡಿದ ಸಹಾಯದ ಬಗ್ಗೆ ವಿವರಿಸಿದರು.

ದ್ಸಿಕ್ರಾ ಎಜ್ಯುಕೇಶನ್ ಸೆಂಟರ್ ಮೂಡಬಿದ್ರೆ ಇದರ ಅಧ್ಯಕ್ಷ ನೌಫಲ್ ಸಖಾಫಿ ಕಳಸ ಮಾತನಾಡಿ ಪ್ರತಿಯೊಂದು ಧರ್ಮದಲ್ಲಿಯೂ ಇರುವ ಸಂದೇಶವಾದ ದ್ವೇಷವನ್ನು ತೊಲಗಿಸು, ಪ್ರೀತಿಯನ್ನು ಬೆಳಗಿಸು ಎನ್ನುವ ಅಂಶವನ್ನು ಆಯಾ ಧರ್ಮ ಗುರುಗಳು ಅರಿತುಕೊಳ್ಳಬೇಕು ಮತ್ತು ಅದನ್ನು ಸಮಾಜಕ್ಕೆ ತಿಳಿಸುವ ಕೆಲಸ ಮಾಡಬೇಕು. ಆಗ ಜಗತ್ತು ಶಾಂತಿಯನ್ನು ಕಾಣುತ್ತದೆ. ಸತ್ಯದ ಅರಿವಿನೊಂದಿಗೆ ಜಗತ್ತೇ ಬೆಳಗುತ್ತದೆ. ಯಾವುದೇ ಧರ್ಮ ಏನು ಹೇಳುತ್ತದೆ‌ ಎನ್ನುವುದನ್ನು ಅರಿತು, ಅಧ್ಯಯನ ನಡೆಸಿ ಅದನ್ನು ತಿಳಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.

ಖಾಝಿ ಝೈನುಲ್ ಉಲಾಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಇವರು ಮಾತನಾಡಿ ಭೂಮಿಯಲ್ಲಿ ಜೀವಿಸುವ ಪ್ರತಿಯೊಂದು ಜೀವಿಯು ದೇವರಿಗೆ ಭಯಪಟ್ಟರೆ ಖಂಡಿತಾ ನಿಮ್ಮನ್ನು ದೇವರು ಕೈ ಬಿಡುವುದಿಲ್ಲ. ಮನುಷ್ಯನಲ್ಲಿ ಜೀವ ಇರುವ ವಸ್ತುವಾಗಲಿ ಜೀವ ಇರದ ವಸ್ತುವಾಗಲಿ ಎಲ್ಲದರ ಬಗ್ಗೆ ಕರುಣೆ ಹಾಗೂ ಕೃಪೆ ಇರಬೇಕು ಇದರಿಂದಾಗಿ ಸ್ನೇಹ, ಸೌಹಾರ್ದತೆ ಬೆಳೆಯಲು ಸಾಧ್ಯ ಎಂದು ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹೇಳಿದರು.

ಅಸ್ಸಯಿದ್ ಕೆ.ಎಸ್. ಅಟಕೋಳ ತಂಙಳ್ ಕುಂಬೋಳ್, ಖಾಝೀ ಝೈನುಲ್ ಉಲಾಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಅಸ್ಸಯಿದ್ ಜಾಫರ್ ಅಸ್ಸಖಾಪ್ ತಂಙಳ್‌ ಕೋಟೇಶ್ವರ ಇವರ ನೇತೃತ್ವ ಹಾಗೂ ಪ್ರಮುಖ ಗಣ್ಯರ ಸಮ್ಮುಖದಲ್ಲಿ ಮಧ್ಯಾಹ್ನ ನಮಾಜ್ ಸಮಯಕ್ಕೆ ನವೀಕೃತ ಮಸೀದಿ ಉದ್ಘಾಟನೆಗೊಂಡಿತು. ಆಸುಪಾಸಿನ ಸರ್ವಧರ್ಮದವರು ಆಗಮಿಸಿ ಮಸೀದಿ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಿ.ಜೆ.ಎಂ ಜನ್ಸಾಲೆ ಇದರ ಅಧ್ಯಕ್ಷ ಜನಾಬ್ ಅಬ್ದುಲ್ ಮುನೀರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಖತೀಬ ಅಬ್ದುಲ್ ಮಜೀದ್ ಜೌಹರಿ, ಗೌರವಾಧ್ಯಕ್ಷ ಹಾಜೀ ಉಮರ್ ಸಾಹೇಬ್, ಉದ್ಯಮಿ ಜನಾಬ್ ಅಲ್ತಾಫ್ ಹೆನ್ನಾಬೈಲು, ಉದ್ಯಮಿ ಜನಾಬ್ ಎಸ್.ಎಂ.ಇರ್ಷಾದ್, ಉದ್ಯಮಿ ಮುಸ್ತಾಕ್ ಮೇಲ್ಚಡ್ಡು, ಸಿದ್ಧಾಪುರ, ಸಿದ್ಧಾಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ‌ ಕುಲಾಲ್, ಮಲೆನಾಡು ಅಭಿವೃದ್ದಿ ಮಂಡಲ ಸದಸ್ಯ ಜಯರಾಂ ಭಂಡಾರಿ, ಬನಶಂಕರಿ ದೇವಸ್ಥಾನ ಉಳ್ಳೂರು 74 ಇದರ ಆಡಳಿತ ಮೊಕ್ತೇಸರ ಸಂಪಿಗೇಡಿ ಸಂಜೀವ ಶೆಟ್ಟಿ,ದುಬೈ ಉದ್ಯಮಿ ಮಹಮ್ಮದ್ ಸಾಹೇಬ್ ಕಿರಿ ಮಂಜೇಶ್ವರ, ಸುನ್ನೀ ಸಂಘಟನೆಗಳ ನಾಯಕರು ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಸ್ಥಪಾಕ ಖತೀಬ್ ಅಬ್ದುಲ್ ಖಾದರ್. ಸಮಾಜ ಸೇವಕ ದಸ್ತಗೀರ್ ಕಂಡ್ಲೂರ್, ಕತಾರ್ ಉದ್ಯಮಿ ಸಿ.ಕೆ.ಫರೋಜ್ ಖಾನ್, ಸಿದ್ದಾಪುರ ಕಾಮತ್ ಹಾರ್ಡವೇರ್ ಮಾಧವ್ ಕಾಮತ್, ಹೆನ್ನಾಬೈಲು ಮಸೀದಿ ಖತೀಬರು ಮೌಲಾನಾ ಶಾ ಆಲಮ್ ರಝ್ಜಿ, ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಅಧ್ಯಕ್ಷ ಬಿಎಸ್ಎಫ್ ರಫಿಕ್ ಗಂಗೋಳ್ಳಿ, ಎಸ.ವೈ.ಎಸ್. ಉಡುಪಿ ಜಿಲ್ಲಾ ಅಧ್ಯಕ್ಷ ಅಡ್ವಕೇಟ್ ಹಮ್ಜತ್ ಹೆಜಮಾಡಿ, ಎಸ್.ಎಂ.ಎ. ಉಡುಪಿ ಜಿಲ್ಲಾ ಅಧ್ಯಕ್ಷ ಮಹಮ್ಮದ್ ಮನ್ಸೂರ್ ಕೋಡಿ, ಉಡುಪಿ ಜಿಲ್ಲಾ ನಮ್ಮ ನಾಡು ಒಕ್ಕೂಟದ ಅಧ್ಯಕ್ಷ ಮುಷ್ತಾಕ್ ಅಹಮ್ಮದ್ ಬೆಳ್ವೆ, ಲೇಖಕ ಮುಸ್ತಾಕ್ ಹೆನ್ನಾಬೈಲು, ಶಕೀರ್ ಮಿಸ್ಬಾಹಿ, ರಜಬ್. ಅಶ್ರಫ್ ಉಪಸ್ಥಿತರಿದ್ದರು.
ಕಟ್ಟಡ ಸಮಿತಿ ಅಧ್ಯಕ್ಷ ಜನಾಬ್ ಎಂ.ಎಸ್. ಮಹಮ್ಮದ್ ಸ್ವಾಗತಿಸಿ, ಇಬ್ರಾಹಿಮ್ ಜೆ. ವಂದಿಸಿದರು.