ಡೈಲಿ ವಾರ್ತೆ:08 ಮಾರ್ಚ್ 2023

ಪುತ್ತೂರು: ದಿಕ್ಕು ತಪ್ಪಿ ಅರಣ್ಯ ಸೇರಿದ 80ರ ಹರೆಯದ ವೃದ್ಧೆ, ಮೂರು ದಿನ ಕಾಡಿನಲ್ಲೇ ಎಲೆಗಳನ್ನು ತಿಂದು ಬದುಕಿದ ಐಸಮ್ಮ!

ಪುತ್ತೂರು:ವೃದ್ಧೆಯೋರ್ವರು ನೆರೆ ಮನೆಗೆ ಹೋಗಿ ವಾಪಾಸ್ಸು ಬರುವಾಗ ದಾರಿ ತಪ್ಪಿ ಕಾಡಿಗೆ ಹೋಗಿದ್ದು, ದಾರಿ ಕಾಣದೆ ಮೂರು ದಿನ ಕಾಡಿನಲ್ಲೇ ಎಲೆಗಳನ್ನೇ ತಿಂದು ಬದುಕಿ ಸುರಕ್ಷಿತವಾಗಿ ಮತ್ತೆ ಮನೆ ಸೇರಿದ ಘಟನೆ ಕೌಕ್ರಾಡಿ ಗ್ರಾಮದ ಹೊಸಮಜಲು ಸಮೀಪದ ದೋಂತಿಲದಲ್ಲಿ ನಡೆದಿದೆ.

ನಾಪತ್ತೆಯಾಗಿದ್ದ ದೋಂತಿಲ ನಿವಾಸಿ ಐಸಮ್ಮ (80)ಅವರು ಮನೆಯಿಂದ ಸುಮಾರು 4 ಕಿ.ಮೀ. ದೂರದ ಕಾಡಿನಲ್ಲಿ ಮೂರು ದಿನಗಳ ಬಳಿಕ ಪತ್ತೆಯಾಗಿದ್ದಾರೆ.

ಐಸಮ್ಮ ಅವರು ಮಾನಸಿಕವಾಗಿ ಅಷ್ಟೊಂದು ಚೆನ್ನಾಗಿರಲಿಲ್ಲ. ದಿನಾ ನೆರೆಯ ಮನೆಗಳಿಗೆ ಭೇಟಿ ನೀಡಿ ರಾತ್ರಿ ತಮ್ಮ ಮನೆ ಸೇರುತ್ತಿದ್ದರು. ಎಂದಿನಂತೆ ಫೆ.28ರಂದು ಸಂಜೆ ಮನೆಯಿಂದ ಹೊರಟವರು ನಾಪತ್ತೆಯಾಗಿದ್ದರು. ರಾತ್ರಿಯಾದರೂ ಐಸಮ್ಮ ಅವರು ಮನೆಗೆ ಹಿಂದಿರುಗದೆ ಇದ್ದ ಹಿನ್ನೆಲೆಯಲ್ಲಿ ಅವರ ಮಗ ಮಹಮ್ಮದ್‌ ನೆರೆ ಮನೆಗಳಲ್ಲಿ ವಿಚಾರಿಸಿದ್ದರು. ಆದರೆ ಎಲ್ಲಿಯೂ ಪತ್ತೆಯಾಗಿರಲಿಲ್ಲ.
ಮಾ.3ರಂದು ಬೆಳಗ್ಗೆ ಹೊಸಮಜಲು ಹಾಲಿನ ಸೊಸೈಟಿಗೆ
ಹಾಲು ತರುವ ವ್ಯಕ್ತಿಗೆ ಅರಣ್ಯದಲ್ಲಿ ವೃದ್ಧೆಯೋರ್ವರು ಅಲೆದಾಡುವುದು ಕಂಡು ಬಂದಿತ್ತು. ಇದರಿಂದ ಹುಡುಕಾಟ ನಡೆಸಿದಾಗ ಐಸಮ್ಮ ಪತ್ತೆಯಾಗಿದ್ದಾರೆ.