ಡೈಲಿ ವಾರ್ತೆ:17 ಮಾರ್ಚ್ 2023

ಕಾರ್ಕಳ: ಕ್ರಿಯೇಟಿವ್‌ ಪ. ಪೂ. ಕಾಲೇಜಿನಲ್ಲಿ ಸಾಹಿತ್ಯ ಸಾಂಗತ್ಯ ಸರಣಿ ಕಾರ್ಯಕ್ರಮ:ಸಾಹಿತ್ಯಕ್ಕೆ ಭಾವನೆಗಳನ್ನು ಉದ್ದೀಪಿಸುವ ಶಕ್ತಿಯಿದೆ – ಮುನಿರಾಜ ರೆಂಜಾಳ

ಕಾರ್ಕಳ: ಸಾಹಿತ್ಯ ಸರ್ವವ್ಯಾಪಿಯಾದುದು. ಸಾಹಿತ್ಯದ ರಸಭಾವಗಳನ್ನು ಅರಿತರೆ ಬದುಕಿನ ದಾರಿ ದೀಪವಾಗಬಲ್ಲದು. ಜೀವನದಲ್ಲಿ ನಾವು ಸಾಹಿತ್ಯ ಮತ್ತು ನೈತಿಕ ಮೌಲ್ಯಗಳಿಗೆ ತೆರೆದುಕೊಂಡಾಗ ಹೊಸ ದೃಷ್ಟಿ ಗೋಚರಿಸುತ್ತದೆ. ಮನಸ್ಸಿನ ತೃಪ್ತಿಗಾಗಿ ನಾವೆಲ್ಲ ಪುಸ್ತಕ ಪ್ರೀತಿಯನ್ನು, ಓದುವಿಕೆಯನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಮುನಿರಾಜ ರೆಂಜಾಳರು ನುಡಿದರು. ಅವರು ಹಿರ್ಗಾನದ ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಹಿತ್ಯ ಸಾಂಗತ್ಯ ಸರಣಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ಸುಂದರ ಭವಿಷ್ಯಕ್ಕಾಗಿ ಸತತ ಪ್ರಯತ್ನ ಮತ್ತು ಮೌಲಿಕ ಗ್ರಂಥಗಳ ಅಧ್ಯಯನ ನಡೆಸಬೇಕು. ರನ್ನ, ಪಂಪ, ನಾಗಚಂದ್ರ, ಕುವೆಂಪು, ಡಿ.ವಿ.ಜಿಯವರ ಸಾಹಿತ್ಯದ ಅಭ್ಯಾಸ ನಡೆಸಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕ್ರಿಯೇಟಿವ್‌, ಪ.ಪೂ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಸಂಸ್ಥಾಪಕರಾದ ಅಶ್ವತ್‌ ಎಸ್‌. ಎಲ್‌, ಉಪನ್ಯಾಸಕ ವೃಂದದವರು, ವಸತಿ ನಿಲಯ ಪಾಲಕರು, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳು ಪಿ.ಆರ್.ಒ ಲಿಶನ್‌ ಗೌಡ ಉಪಸ್ಥಿತರಿದ್ದರು. ಅಶ್ವತ್‌ ಎಸ್.ಎಲ್‌ ಪ್ರಾಸ್ತವಿಕ ನುಡಿಗಳೊಂದಿಗೆ ಸ್ವಾಗತಿಸಿದರು.
ಉಪನ್ಯಾಸಕ ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.