ಡೈಲಿ ವಾರ್ತೆ:17 ಮಾರ್ಚ್ 2023

“ನನ್ನ ಸಹೋದರಿ” ಕುಂದಾಪುರ ವಲಯದ ಲೋಗೋ ಅನಾವರಣ ಮತ್ತು ಜಾಗೃತಿ ಕಾರ್ಯಕ್ರಮ

ಕುಂದಾಪುರ:”ನನ್ನ ಸಹೋದರಿ” ಕುಂದಾಪುರ ವಲಯದ ಲೋಗೋ ಅನಾವರಣ ಮತ್ತು ಜಾಗೃತಿ ಕಾರ್ಯಕ್ರಮವು ದಿನಾಂಕ 17 ಮಾರ್ಚ್ 2023 ಶುಕ್ರವಾರ ಸಂಜೆ ತೆಕ್ಕಟ್ಟೆಯ ಪ್ರೆಸಿಡೆಂಟ್ ಕನ್ವೆನ್ಷನ್ ಸೆಂಟರ್ ನಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅಬ್ದುಲ್ ಖಾದರ್ ಮೂಡಗೋಪಾಡಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರಧಾನ ಕಾರ್ಯದರ್ಶಿ ಮೌ/ ಝಮೀರ್ ಅಹ್ಮದ್ ರಶಾದಿಯವರ ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅಧ್ಯಕ್ಷರು ಸ್ವಾಗತಿಸಿದರು.

ಸಯ್ಯದ್ ಜಾಫರ್ ತಂಙಲ್ ಕೋಟೇಶ್ವರ ಮತ್ತು ಮೌಲಾನಾ ಉಬೈದುಲ್ಲಾ ನದ್ವೀ ಕಂಡ್ಲೂರು ಸಂಸ್ಥೆಯ ಲೋಗೋ ಅನಾವರಣಗೊಳಿಸಿ ಶುಭ ಹಾರೈಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಸಾಮಾಜಿಕ ಕಾರ್ಯಕರ್ತರಾದ ಜನಾಬ್ ರಫೀಕ್ ಮಾಸ್ಟರ್ ಪ್ರೆಸೆಂಟೇಶನ್ ಮೂಲಕ ಬಡತನದ ಕಾರಣದಿಂದಾಗಿ ಮದುವೆಯಾಗಲು ಸಾಧ್ಯವಾಗದ ಸಮುದಾಯದ ಸಹೋದರಿಯರ ಪರಿಸ್ಥಿತಿ ಮತ್ತು ನಮ್ಮ ಜವಾಬ್ದಾರಿಗಳ ಬಗ್ಗೆ ಸತ್ಯ ಘಟನೆಗಳ ಬೆಳಕಿನಲ್ಲಿ ವಿವರಿಸಿದರು ಮತ್ತು ಶ್ರೀಮಂತರು ಬಡ ಹೆಣ್ಣುಮಕ್ಕಳನ್ನು ತನ್ನ ಸಹೋದರಿ ಎಂಬ ಭಾವನೆಯೊಂದಿಗೆ ಮದುವೆಯ ಜವಾಬ್ದಾರಿ ವಹಿಸಬೇಕೆಂದು ಹುರಿದುಂಬಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ರಫೀಕ್ ಮಾಸ್ಟರ್ ಮಂಗಳೂರು, ಉದ್ಯಮಿಗಳು ಮತ್ತು ಸಮಾಜ ಸೇವಕರಾದ ಅಬ್ದುಲ್ ಸತ್ತಾರ್ ಕೋಟೇಶ್ವರ ಹಾಗೂ ಆಸಿಫ್ ಪಾರಂಪಳ್ಳಿಯವರನ್ನು ‘ನನ್ನ ಸಹೋದರಿ’ ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಕಾರ್ಯದರ್ಶಿ ವಂದಿಸಿದರು ಮತ್ತು ಹುಸೇನ್ ಹೈಕಾಡಿ ನಿರೂಪಿಸಿದರು. ಕುಂದಾಪುರ ವಲಯದ ಜಮಾಅತ್ ಹೊಣೆಗಾರರು, ಸಾಮಾಜಿಕ ಕಾರ್ಯಕರ್ತರು, ಗಣ್ಯ ವ್ಯಕ್ತಿಗಳು ಭಾಗವಹಿಸಿದರು.