ಡೈಲಿ ವಾರ್ತೆ:30 ಮಾರ್ಚ್ 2023

ಹಲ್ಲೆ ಆರೋಪಿಗಳ ಹಲ್ಲು ಕಿತ್ತು, ವೃಷಣವನ್ನು ಜಜ್ಜಿ ‌‌ ಚಿತ್ರಹಿಂಸೆ; ಐಪಿಎಸ್ ಅಧಿಕಾರಿಯ ಅಮಾನತು

ಚೆನ್ನೈ:ಹಲ್ಲೆ ಆರೋಪಿಗಳನ್ನು ವೃಷಣಗಳನ್ನು ಜಜ್ಜಿ, ಹಲ್ಲು ಕಿತ್ತು ಕಸ್ಟಡಿ ಚಿತ್ರಹಿಂಸೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ಐಪಿಎಸ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.

ಬಲ್ವೀರ್ ಸಿಂಗ್ ಅವರನ್ನು ಅಮಾನತುಗೊಳಿಸುವಂತೆ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಇಂದು ರಾಜ್ಯ ವಿಧಾನಸಭೆಗೆ ತಿಳಿಸಿದರು.
ನಾನು ಅವರನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದೇನೆ. ಮ್ಯಾಜಿಸ್ಟ್ರೇಟ್ ವಿಚಾರಣೆಯ ವರದಿಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪೊಲೀಸ್ ಠಾಣೆಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಯಾವುದೇ ರಾಜಿ ಇಲ್ಲ ಎಂದು ಶ್ರೀ ಸ್ಟಾಲಿನ್ ಹೇಳಿದ್ದಾರೆ.

ಬಲ್ವೀರ್ ಸಿಂಗ್ ಹತ್ತು ದಿನಗಳ ಹಿಂದೆಯಷ್ಠೇ ತಿರುನೆಲ್ವೇಲಿ ಜಿಲ್ಲೆಯ ಅಂಬಾಸಮುದ್ರಂನಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ನೇಮಕಗೊಂಡಿದ್ದರು. ಇವರು 2020ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದರು. ಕಟಿಂಗ್ ಪ್ಲೈಯರ್‌ನಿಂದ ಐದು ಪುರುಷರ ಹಲ್ಲುಗಳನ್ನು ಕಿತ್ತಿದ್ದಾರೆ ಮತ್ತು ನವವಿವಾಹಿತ ಪುರುಷನ ವೃಷಣಗಳನ್ನು ಪುಡಿಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆ ಪ್ರಕರಣದ ಆರೋಪಿಗಳು ಜಾಮೀನಿನ ಮೇಲೆ ಹೊರ ಹೋಗಿದ್ದಾರೆ. ಅವರಲ್ಲಿ ಕೆಲವರು ಸಾಮಾಜಿಕ ಮಾಧ್ಯಮದಲ್ಲಿ ಅಧಿಕಾರಿಯನ್ನು ಕಸ್ಟಡಿ ಚಿತ್ರಹಿಂಸೆ ಬಗ್ಗೆ ಆರೋಪಿಸಿದರು.

ಸಿಎಂ ಆದೇಶದ ಬೆನ್ನಲ್ಲೇ ಸಿಂಗ್ ವಿರುದ್ಧ ಮ್ಯಾಜಿಸ್ಟ್ರೇಟ್ ತನಿಖೆಗೆ ಜಿಲ್ಲಾಧಿಕಾರಿಗಳು ಈಗಾಗಲೇ ಆದೇಶ ನೀಡಿದ್ದಾರೆ. ಆದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಮಾನವ ಹಕ್ಕುಗಳ ರಕ್ಷಕರು ಆಗ್ರಹಿಸಿದ್ದಾರೆ.