ಮಂಡ್ಯ: ಇಲ್ಲಿನ ವಿಸಿ ನಾಲೆಯಲ್ಲಿ ಮುಳುಗಿ ಐವರು ಮೃತಪಟ್ಟ ದಾರುಣ ಘಟನೆ ಮಂಡ್ಯ ತಾಲೂಕಿನ ದೊಡ್ಡ ಕೊತ್ತಗೆರೆ ಗ್ರಾಮದ ಬಳಿ ನಡೆದಿದೆ.

ನೀರುಪಾಲಾದ ಐವರ ಪೈಕಿ ಮೂವರ ಶವವನ್ನು ಮೇಲಕ್ಕೆತ್ತಲಾಗಿದ್ದು, ಇಬ್ಬರಿಗಾಗಿ ಹುಡುಕಾಟ ಮುಂದುವರಿದಿದೆ.
ಬೆಂಗಳೂರಿನ ನೀಲಸಂದ್ರ ಗ್ರಾಮ ಮೂಲದ 15 ಜನರ ತಂಡವೊಂದು ಸೋಮವಾರ ಹಲ್ಲೆಗೆರೆ ಗ್ರಾಮಕ್ಕೆ ಬಂದಿತ್ತು. ಮುಂಜಾನೆ ಕುತೂಹಲದಿಂದ ದೊಡ್ಡ ಕೊತ್ತಗೆರೆ ಗ್ರಾಮದ ವಿ ಸಿ ನಾಲೆಯನ್ನು ನೋಡಲು ಹೋಗಿದ್ದರು.
ಈ ಸಂದರ್ಭ ಇವರಲ್ಲಿ ಕೆಲವರು ನಾಲೆಗೆ ಇಳಿದು ಸ್ನಾನ ಮಾಡುತ್ತಿದ್ದರು. ಆಗ ಒಬ್ಬ ಬಾಲಕ ನೀರಿನಲ್ಲಿ ಮುಳುಗಿದ. ಅದನ್ನು ಕಂಡು ಆತನ ರಕ್ಷಣೆಗಾಗಿ ಉಳಿದವರು ಪ್ರಯತ್ನಿಸಿದರು. ಇದರಿಂದಾಗಿ ಒಟ್ಟು ಐವರು ನೀರುಪಾಲಾಗಿ ಬಿಟ್ಟರು.

ಮೃತಪಟ್ಟವರನ್ನು ಅನಿಷಾ ಬೇಗಂ (34), ಮಹತಾಬ್ (10) ತಷ್ಮಿಯಾ (22) ಮತ್ತು ಅತಿಕಾ (22), ಹರ್ಷಕ್ ಎಂದು ಗುರುತಿಸಲಾಗಿದೆ. ಅತಿಕಾ ಮತ್ತು ಹರ್ಷಕ್‌ ಅವರ ಮೃತದೇಹಕ್ಕಾಗಿ ಹುಡುಕುತ್ತಿದ್ದಾರೆ. ಬಸರಾಳು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿದ್ದಾರೆ