ಡೈಲಿ ವಾರ್ತೆ:25 ಏಪ್ರಿಲ್ 2023

ಬೆಂಗಳೂರು: ಇಬ್ಬರು ಅಂತರರಾಜ್ಯ ಕುಖ್ಯಾತ ಸರಗಳ್ಳರ ಬಂಧನ: 6 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರ ವಾಹನಗಳ ವಶಕ್ಕೆ

ಬೆಂಗಳೂರು: ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಬಹುದಿನಗಳಿಂದ ಸರಗಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತರರಾಜ್ಯ ಸರಗಳ್ಳರನ್ನು ಬೆಂಗಳೂರಿನ ಗಿರಿನಗರದ ಪೊಲೀಸರು ಬಂಧಿಸಿದ್ದಾರೆ.

ಸೈಯದ್ ಬಾಷ (34), ಶೇಕ್ ಅಯೂಬ್ (32) ಬಂಧಿತ ಆರೋಪಿಗಳಾಗಿದ್ದು, 6 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 2 ದ್ವಿಚಕ್ರ ವಾಹನಗಳನ್ನ ವಶಪಡಿಸಿಕೊಂಡಿದ್ದಾರೆ.

ಆಂಧ್ರಪ್ರದೇಶ ಮೂಲದ ಕಳ್ಳರು ಬಸ್‌ ನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ನಂತರ ಇಲ್ಲಿ ಬೈಕ್ ಕಳ್ಳತನ ಮಾಡಿ, ಕದ್ದ ಬೈಕ್‌ ನಲ್ಲೇ ಸರಗಳ್ಳತನ ಮಾಡುತ್ತಿದ್ದರು. ಆಮೇಲೆ ಬೈಕ್ ಬಿಟ್ಟು ಆಟೋ ಮೂಲಕ ಕೆ.ಆರ್ ಪುರಂಗೆ ತಲುಪಿ ಅಲ್ಲಿಂದ ಬಸ್ ಮೂಲಕ ಮತ್ತೆ ಆಂಧ್ರಕ್ಕೆ ತಲುಪುತ್ತಿದ್ದರು.

ಅಷ್ಟೇ ಅಲ್ಲ ಸರಗಳ್ಳತನ ಮಾಡಿ ಕೂಡಲೇ ಬಟ್ಟೆ ಬದಲಿಸುತ್ತಿದ್ದ ಖದೀಮರು, ಸಿಸಿಟಿಯಲ್ಲಿ ಚಹರೆ ಗೊತ್ತೇ ಆಗದಂತೆ ಎಸ್ಕೇಪ್ ಆಗುತ್ತಿದ್ದರು ಎಂದು ತಿಳಿದು ಬಂದಿದೆ.