ಡೈಲಿ ವಾರ್ತೆ: 05 ಮೇ 2023

ಭಟ್ಕಳ:ಕಾರು ಹಾಗೂ ಆಟೋ ರಿಕ್ಷಾ ನಡುವೆ ಅಪಘಾತ ಬಾಲಕ ಮೃತ್ಯು

ಭಟ್ಕಳ: ವೇಗವಾಗಿ ಚಲಿಸುತ್ತಿದ್ದ ಕಾರೊಂದರ ಟೈರ್ ಪಂಚರ್ ಆದ ಪರಿಣಾಮ ನಿಯಂತ್ರಣ ಕಳೆದುಕೊಂಡ ಕಾರು ಎದುರಿನಿಂದ ಬರುತ್ತಿದ್ದ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ 11 ವರ್ಷ ಪ್ರಾಯದ ಬಾಲಕ ಮೃತಪಟ್ಟ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲಿ ರಸ್ತೆಯಲ್ಲಿ ನಡೆದಿದೆ.

ಭಟ್ಕಳದ ನವತ್ ಕಾಲನಿ ಮಕ್ತಬ್ ಜಾಮಿಯಾ ವಿದ್ಯಾರ್ಥಿ ಝುಹೈಮ್(11) ಮೃತ ಬಾಲಕ. ಈತ ತನ್ನ ಅಕ್ಕನೊಂದಿಗೆ ಆಝಾದ್ ನಗರದ ಮಸೀದಿ ಶಾಫಿ ಬಳಿಯ ತಂದೆಯ ಮನೆಯಿಂದ ಜಾಲಿ ರಸ್ತೆಯ ಆಝಾದ್ ನಗರ 6ನೇ ಕ್ರಾಸ್ ನ ಸಿದ್ದೀಕ್ ಬೀದಿಯಲ್ಲಿರುವ ತನ್ನ ತಾಯಿಯ ಮನೆಗೆ ಆಟೋದಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಗಂಭೀರವಾಗಿ ಗಾಯಗೊಂಡಿದ್ದ ಝುಹೈಮ್ ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.