ಡೈಲಿ ವಾರ್ತೆ:08 ಮೇ 2023

ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ವತಿಯಿಂದ ನಡೆದ ವಸಂತ ವೇದ ಶಿಬಿರದ ಸಮಾರೋಪ ಸಮಾರಂಭ

ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇವಸ್ಥಾನದ ವತಿಯಿಂದ, ಕೂಟ ಮಹಾಜಗತ್ತು (ರಿ)ಸಾಲಿಗ್ರಾಮ ಅಂಗ ಸಂಸ್ಥೆಯ ಸಹಕಾರದೊಂದಿಗೆ ಹಮ್ಮಿಕೊಂಡಿರುವ 23ನೇ ವರ್ಷದ ವಸಂತ ವೇದ ಶಿಬಿರದ ಸಮಾರೋಪ ಸಮಾರಂಭವು ಮೇ 7 ರಂದು ಭಾನುವಾರ ಸಂಜೆ ಶ್ರೀ ಗುರುನರಸಿಂಹ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಕೆ. ಎಸ್. ಕಾರಂತರು ವಹಿಸಿದ್ದರು. ಅವರು ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಔಪಚಾರಿಕ ಶಿಕ್ಷಣವು ತನ್ನದೇ ಆದ ಮಿತಿಯನ್ನು ಹೊಂದಿದ್ದು, ಬದುಕಿನಲ್ಲಿ ಯಶಸ್ಸನ್ನು ಸಾಧಿಸಲು ಕೌಶಲಾಭಿವೃದ್ದಿಯ ಅಗತ್ಯವಿದೆ. ಈ ನಿಟ್ಟಿನಲ್ಲಿ ವಸಂತ ವೇದ ಶಿಬಿರವು ಚಿತ್ತ ಶುದ್ಧಿ, ಭಾವ ಶುದ್ಧಿ ಮತ್ತು ಭಾಷಾ ಶುದ್ದಿಯನ್ನು ಸಿದ್ಧಿಸುವ ಭೂಮಿಕೆಯಾಗಿದೆ ಎಂದು ಸಾಲಿಗ್ರಾಮದ ಶ್ರೀ ಗುರು ನರಸಿಂಹ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಶ್ರೀ ದೇವಳದ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗರು ಮಾತನಾಡುತ್ತ ವ್ಯಕ್ತಿತ್ವ ವಿಕಸನಕ್ಕೆ ಇಂತಹ ಶಿಬಿರಗಳು ಆವಶ್ಯಕ” ಎಂದರು.

ಶಿಬಿರಾರ್ಥಿಗಳಲ್ಲಿ ಕೆಲವರು ಮಾತಾಡಿ ಶಿಬಿರದ ವ್ಯವಸ್ಥೆಯ ಬಗ್ಗೆ ಶ್ಲಾಘಿಸಿದರು. ಕೋಶಾಧಿಕಾರಿ ಪರಶುರಾಮ ಭಟ್ಟರು,ದೇವಳದ ಗಣೇಶ ಭಟ್ಟ, ವ್ಯವಸ್ಥಾಪಕ ನಾಗರಾಜ ಹಂದೆ. ಕೂ ಮ ಜ ಸಾಲಿಗ್ರಾಮ ಅಂಗಸಂಸ್ಥೆಯ ಚಿದಾನಂದ ತುಂಗ, ಕೇಂದ್ರ ಸಂಸ್ಥೆಯ ಮಾಜಿ ಕಾರ್ಯದರ್ಶಿ ಮಂಜುನಾಥ ಉಪಾಧ್ಯ ಇವರೆಲ್ಲ ಶಿಬಿರಕ್ಕೆ ಸಹಕರಿಸಿದರು.

350 ಕ್ಕೂ ಹೆಚ್ಚು ವಿಪ್ರ ವಟುಗಳು ವಸಂತ ವೇದ ಶಿಬಿರದಲ್ಲಿ ಪಾಲ್ಗೊಂಗಡಿದ್ದು. ಈ ಸಂದರ್ಭದಲ್ಲಿ ಶಿಬಿರದ ಗುರುಗಳನ್ನು ಸಭೆಯಲ್ಲಿ ಗೌರವಿಸಲಾಯಿತು.

ಸಮಾರಂಭದಲ್ಲಿ ಶ್ರೀ ದೇವಳದ ಆಡಳಿತ ಮಂಡಳಿ ಕಾರ್ಯದರ್ಶಿ ಲಕ್ಷ್ಮಿನಾರಾಯಣ ತುಂಗ, ಕೂಟಮಹಾಜಗತ್ತು ಕೇಂದ್ರ ಸಂಸ್ಥೆಯ ಮಾಜಿ ಉಪಾಧ್ಯಕ್ಷ , ಕೆ.ತಾರಾನಾಥ ಹೊಳ್ಳ, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆಯ ಅಧ್ಯಕ್ಷ ಶ್ರೀಪತಿ ಅಧಿಕಾರಿ ಹಾಗೂ ಶಿಬಿರದ ಮುಖ್ಯ ಗುರುಗಳಾದ ವಾದಿರಾಜ ಐತಾಳರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಅಖಿಲೇಶ್ ನಿರೂಪಿಸಿ, ಶ್ರೀಪತಿ ಅಧಿಕಾರಿ ವಂದಿಸಿದರು.