ಡೈಲಿ ವಾರ್ತೆ:08 ಮೇ 2023

ಬಿ. ರಮಾನಾಥ ರೈ ಬೃಹತ್ ರೋಡ್ ಶೋ, ಹರಿದು ಬಂತು ಜನ ಸಾಗರ. ಬಿ.ಸಿ.ರೋಡ್ ತ್ರಿವರ್ಣಮಯ

ಬಂಟ್ವಾಳ : ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಅವರು ಬಿ.ಸಿ ರೋಡ್ ಬೃಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಕೈಕಂಬ ಪೊಳಲಿ ದ್ವಾರದ ತನಕ ಸೋಮವಾರ ಸಂಜೆ ಬೃಹತ್ ರೋಡ್ ಶೋ ಮೂಲಕ ಮತ ಯಾಚನೆ ನಡೆಸಿದರು.

ಕೈಕಂಬ ಪೊಳಲಿ ದ್ವಾರದ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಐಶಾರಾಮಿ ಜೀವನ ನಡೆಸುವ ಆಸೆಯಿಂದ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿಲ್ಲ. ಕ್ಷೇತ್ರದಲ್ಲಿ ಆರು ಬಾರಿ ಗೆಲ್ಲಿಸಿ ಶಾಸಕ, ಸಚಿವನನ್ನಾಗಿ ಮಾಡಿದ್ದೀರಿ. ಮತ್ತೆ 9ನೇ ಬಾರಿಗೆ ಸ್ಪರ್ಧಿಸುವ ಅವಕಾಶವನ್ನು ನೀಡಿದ್ದೀರಿ. ಈ ಋಣವನ್ನು ನಾನು ನನ್ನ ಜನ್ಮಜನ್ಮಾಂತರಕ್ಕೂ ಮರೆಯಲು ಸಾಧ್ಯವಿಲ್ಲ. ಈ ಋಣವನ್ನು ತೀರಿಸುವುದಕ್ಕಾಗಿ ಮತ್ತು ನಿಮ್ಮೆಲ್ಲರ ಸೇವೆಗಾಗಿ ಹಾಗೂ ಕ್ಷೇತ್ರದ ಜನರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಡುವುದಕ್ಕಾಗಿ ಮತ್ತೊಮ್ಮೆ ಸ್ಪರ್ಧಿಸಿದ್ದೇನೆ ಎಂದರು.

ಕಳೆದ ಚುನಾವಣೆಯಲ್ಲಿ ಸತತವಾಗಿ ಅಪಪ್ರಚಾರದ ಮೂಲಕ ನನ್ನನ್ನು ಸೋಲಿಸಲಾಯಿತು. ಸೋತ ಬಗ್ಗೆ ಬೇಸರವಿಲ್ಲ. ಆದರೆ ಸೋಲಿಸಿದ ವಿಧಾನದ ಬಗ್ಗೆ ಬೇಸರವಿದೆ ಎಂದು ಸ್ಮರಿಸಿದ ಅವರು ನನಗೆ ಏನೂ ಸಮಸ್ಯೆಯಿಲ್ಲ, ನಾನು ಆರಾಮವಾಗಿದ್ದೇನೆ ಎಂದು ಕೆಲವರು ಭಾವಿಸಿರಬಹುದು. ಆದರೆ, ನನಗೂ ಕಷ್ಟಗಳಿವೆ, ನಾನೂ ಕಷ್ಟದಲ್ಲಿದ್ದೇನೆ. ನಾನು ನನ್ನ ರಾಜಕೀಯ ಜೀವನದಲ್ಲಿ ಪ್ರಾಮಾಣಿಕತೆಗೆ ಹೆಚ್ಚು ಒತ್ತು ನೀಡಿದವನು. ಭ್ರಷ್ಟಾಚಾರ ರಹಿತ, ಕಳಂಕ ರಹಿತ ಜೀವನ ನಡೆಸಿದವನು ಎಂದು ರೈ ತಿಳಿಸಿದರು.

ಯಾವುದೇ ಸ್ಟಾರ್ ಪ್ರಚಾರಕರು ಇಲ್ಲದೆಯೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಿದ್ದೀರಿ. ಅದಕ್ಕಾಗಿ ನಾನು ನಿಮಗೆ ಚಿರ ಋಣಿಯಾಗಿದ್ದೇನೆ. ನಾಮಪತ್ರ ಸಲ್ಲಿಕೆಯ ದಿನವೇ ಸಾವಿರಾರು ಸಂಖ್ಯೆಯಲ್ಲಿ ಬಂದು ನನಗೆ ಆಶೀರ್ವದಿಸಿದಿರಿ. ಇದೀಗ ಮತ್ತೆ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹರಸಿದ್ದೀರಿ. ಇನ್ನಿರುವ ಕೆಲವೇ ಗಂಟೆಗಳಲ್ಲಿ ಪ್ರತಿಯೊಬ್ಬರೂ ಶ್ರಮಪಟ್ಟು ಕಾಂಗ್ರೆಸ್ ಅನ್ನು ಬಂಟ್ವಾಳದಲ್ಲಿ ಮತ್ತೊಮ್ಮೆ ಗೆಲ್ಲಿಸಬೇಕು ಎಂದು ರಮಾನಾಥ ರೈ ಮನವಿ ಮಾಡಿದರು.

ಚುನಾವಣೆಯಲ್ಲಿ ಗೆದ್ದಾಗ ನಾನು ಈ ಹಿಂದೆಯೂ ಬೆಂಗಳೂರಿನಲ್ಲಿ ಉಳಿಯದೆ ನಿಮ್ಮ ಜೊತೆಗೇ ಇದ್ದು ಜನಸೇವೆ ಮಾಡಿದ್ದೇನೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ನೀವು ಪ್ರೀತಿಯಿಂದ ಆಹ್ವಾನ ಕೊಟ್ಟಾಗ ಎಷ್ಟೇ ಸಮಸ್ಯೆಯಿದ್ದರೂ, ನಿಮ್ಮ ಯಾವುದೇ ಕಾರ್ಯಕ್ರಮಗಳಿಗೆ ಬಂದು, ನಿಮ್ಮೆಲ್ಲರ ಕಷ್ಟ-ಸುಖದಲ್ಲಿ ಭಾಗಿಯಾಗಿದ್ದೇನೆ ಎಂದ ಅವರು
ನಾನು ವ್ಯಾಪಾರಿ ಅಲ್ಲ, ನನಗೆ ಯಾವುದೇ ವ್ಯವಹಾರಗಳಿಲ್ಲ. ನನ್ನ ವ್ಯವಹಾರಕ್ಕಾಗಿ ಯಾವುದೇ ಅಧಿಕಾರಿ ಮೇಲೆ ಪ್ರಭಾವ ಬೀರುವ ಅಗತ್ಯವೂ ನನಗಿಲ್ಲ. ನನ್ನ ವ್ಯವಹಾರವನ್ನು ವೃದ್ಧಿಸಲೂ ನಾನು ರಾಜಕೀಯಕ್ಕೆ ಬಂದಿಲ್ಲ. ಬಂಟ್ವಾಳದ ಯಾವುದೇ ಗುತ್ತಿಗೆದಾರರನ್ನು ಬೇಕಾದರೆ ಕೇಳಿರಿ, ನಾನು ಅವರಿಂದ ಯಾವುದೇ ಪ್ರಯೋಜನ ಬಯಸಿದವನಲ್ಲ ಎಂದರು.

ಚಿಕ್ಕ ವಯಸ್ಸಿನಿಂದಲೇ ಹಿರಿಯರ ಆಶೀರ್ವಾದದೊಂದಿಗೆ ಜನಸೇವೆ ಮಾಡಿಕೊಂಡು ಬಂದವನು. ಎಲ್ಲಾ ಜಾತಿ-ಧರ್ಮದ ಜನರ ಪ್ರೀತಿಯನ್ನು ಪಡೆದವನು. ಯಾವುದೇ ಜಾತಿ-ಧರ್ಮಗಳ ನಡುವೆ ಯಾವುದೇ ತಾರತಮ್ಯ ಮಾಡಿದವನಲ್ಲ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ವಿಚಾರವನ್ನು ಪ್ರತಿಪಾದಿಸಿದ ಬ್ರಹ್ಮಶ್ರೀ ನಾರಾಯಣಗುರುಗಳ ಅನುಯಾಯಿ ನಾನು. ಕುವೆಂಪು, ಅಂಬೇಡ್ಕರ್, ಬಸವಣ್ಣರ ಚಿಂತನೆಯಡಿ ಬದುಕಿ ತೋರಿಸಿದವನು. ಆ ನಿಟ್ಟಿನಲ್ಲಿ ಜನರನ್ನು ಪ್ರೀತಿಸಿದವನು ಎಂದವರು ತಿಳಿಸಿದರು.


ಹಿರಿಯ ಮುಖಂಡರಾದ ಬಿ.ಎಚ್. ಖಾದರ್ ಬಂಟ್ವಾಳ, ಕೆಪಿಸಿಸಿ ಮಾಜಿ ಸದಸ್ಯ ಅಶ್ವನಿ ಕುಮಾರ್ ರೈ, ಸದಸ್ಯರುಗಳಾದ ಪಿಯೂಸ್ ಎಲ್. ರೊಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಬೇಬಿ ಕುಂದರ್, ಪಕ್ಷ ಪ್ರಮುಖರುಗಳಾದ ಪದ್ಮಶೇಖರ್ ಜೈನ್, ಮಾಯಿಲಪ್ಪ ಸಾಲ್ಯಾನ್, ಸುದರ್ಶನ್ ಜೈನ್, ಉಸ್ಮಾನ್ ಕರೋಪಾಡಿ, ಅಬ್ಬಾಸ್ ಅಲಿ, ಶರೀಫ್ ಶಾಂತಿ ಅಂಗಡಿ, ಲುಕ್ಮಾನ್ ಬಂಟ್ವಾಳ, ಪಿ.ಎ. ರಹೀಂ, ಇಬ್ರಾಹಿಂ ನವಾಝ್ ಬಡಕಬೈಲ್, ಸುರೇಶ್ ಜೋರಾ, ಶಬೀರ್ ಸಿದ್ದಕಟ್ಟೆ, ಜಯಂತಿ ಪೂಜಾರಿ, ಲವೀನಾ ವಿಲ್ಮಾ ಮೊರಾಸ್, , ಜನಾರ್ಧನ ಚೆಂಡ್ತಿಮಾರ್, ವಾಸು ಪೂಜಾರಿ, ಜೊಸ್ಪಿನ್ ಡಿಸೋಜ, ಜೆಸಿಂತಾ ಡಿಸೋಜಾ, ಹೈಡಾ ಸುರೇಶ್, ಮೊಹಮ್ಮದ್ ನಂದರಬೆಟ್ಟು, ಸಂಪತ್ ಕುಮಾರ್ ಶೆಟ್ಟಿ, ಮೊಹಮ್ಮದ್ ನಂದಾವರ, ಪ್ರೀತಿರಾಜ್ ದ್ರಾವಿಡ, ಇಬ್ರಾಹಿಂ ಕೈಲಾರ್, ಜಗದೀಶ್ ಕೊಯಿಲ, ಪ್ರವೀಣ್ ಬಂಟ್ವಾಳ್, ಸದಾಶಿವ ಬಂಗೇರ, ಹಸೈನಾರ್ ಶಾಂತಿಅಂಗಡಿ, ಸುರೇಶ್ ಬಿ.ನಾವೂರು, ಲೋಲಾಕ್ಷ ಶೆಟ್ಟಿ , ಬಾಲಕೃಷ್ಣ ಆಳ್ವ ಕೊಡಾಜೆ, ಅರ್ಶದ್ ಸರವು, ಸಿದ್ದೀಕ್ ಸರವು, ಪ್ರಶಾಂತ್ ಕುಲಾಲ್, ಮತ್ತಿತರರು ಭಾಗವಹಿಸಿದ್ದರು.


*ಬಾಕ್ಸ್*

ಭಾಷಣ ಆರಂಭಿಸುತ್ತಿದ್ದಂತೆ, ನೆರೆದಿದ್ದ ಜನಸಮೂಹವನ್ನು ನೋಡಿ, ಜನರ ಪ್ರೀತಿ, ಭಾವನೆಗಳನ್ನು ಗಮನಿಸಿ ರೈಯವರು ಭಾವುಕರಾದರು. ಹಲವು ವಿಷಯಗಳನ್ನು ಮಾತನಾಡುವಾಗ ರೈಯವರು ಎರಡ್ಮೂರು ಬಾರಿ ಭಾವುಕರಾದುದು ಕಂಡು ಬಂತು. ಜನರ ನಡುವಿನಿಂದ ರೈಯವರಿಗೆ ಆಗಾಗ ಭರವಸೆಯ ಘೋಷಣೆಗಳು ಮೊಳಗಿದವು. ಸ್ಟಾರ್ ಪ್ರಚಾರಕರಿಲ್ಲದ ಬಗ್ಗೆ ಭರವಸೆಯ ಮಾತುಗಳನ್ನಾಡುತ್ತಿದ್ದ ಕಾರ್ಯಕರ್ತರು, ರೈಯವರೇ ನಮಗೆ ‘ಸ್ಟಾರ್’ ಎಂದು ಹೇಳುತ್ತಿದ್ದರು.
ಮೆರವಣಿಗೆ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು. ಹೆಚ್ಚು ವಾಹನ ದಟ್ಟಣೆಯಾಗದಂತೆ ನೋಡಿಕೊಳ್ಳಲಾಗಿತ್ತು. ಸ್ವಲ್ಪ ಹೊತ್ತಷ್ಟೇ ವಾಹನ ಸಂಚಾರಕ್ಕೆ ಅಡಚಣೆಯಾದುದರಿಂದ ಯಾರಿಗೂ ಸಮಸ್ಯೆ ಎನಿಸಲಿಲ್ಲ. ಸಹಸ್ರಾರು ಸಂಖ್ಯೆಯ ಜನರಿದ್ದರೂ ಸಾರ್ವಜನಿಕರಿಗೆ ಸಮಸ್ಯೆಯಾಗದ ರೈಗಳ ಬೃಹತ್ ರೋಡ್ ಶೋ ಬಗ್ಗೆ ಬಸ್ ನಿಲ್ದಾಣದ ಬಳಿ ಜನ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರು. ಈ ಬಾರಿಯ ಚುನಾವಣೆಯಲ್ಲಿ ರೈಗಳ ನಾಮಪತ್ರ ಸಲ್ಲಿಕೆ ಹಾಗೂ ರೋಡ್ ಶೋಗೆ ನಿರೀಕ್ಷೆಗೂ ಮೀರಿ ಜನ ಸೇರಿದ್ದು, ಈ ಚುನಾವಣೆಯ ದಿಕ್ಸೂಚಿ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು.