ಡೈಲಿ ವಾರ್ತೆ:09 ಮೇ 2023

ಸೇತುವೆಯಿಂದ ಕೆಳಗೆ ಬಿದ್ದ ಬಸ್: 15 ಮಂದಿ ಮೃತ್ಯು, ಹಲವರಿಗೆ ಗಂಭೀರ ಗಾಯ!

ಮಧ್ಯಪ್ರದೇಶ: ಕೇರಳದ ದೋಣಿ ದುರಂತದಲ್ಲಿ 22 ಮಂದಿಯ ಸಾವಿನ ದುರಂತ ಘಟನೆಯ ಬೆನ್ನಲ್ಲೇ ಇಂದು ಮಧ್ಯಪ್ರದೇಶದಲ್ಲಿ ನಡೆದ ಭೀಕರ ಬಸ್ ಅಪಘಾತದಲ್ಲಿ 15 ಮಂದಿ ಮೃತಪಟ್ಟು 25 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯಲ್ಲಿ ಸುಮಾರು 70-80 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು 50 ಅಡಿ ಸೇತುವೆಯಿಂದ ಬಿದ್ದು ಅಪಘಾತ ಸಂಭವಿಸಿದೆ.

ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಸೇತುವೆಯಿಂದ ಬಸ್ ಬಿದ್ದ ಪರಿಣಾಮ ಕನಿಷ್ಠ 15 ಜನರು ಸಾವನ್ನಪ್ಪಿದ್ದಾರೆ ಮತ್ತು 25 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಧರಂ ವೀರ್ ಸಿಂಗ್ ಹೇಳಿದ್ದಾರೆ.

ಮೃತರಲ್ಲಿ 6 ಮಂದಿ ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ ಎಂದು ವರದಿ ತಿಳಿಸಿದೆ.
ಮಧ್ಯಪ್ರದೇಶ ಸರ್ಕಾರ ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ತಕ್ಷಣದ ಆರ್ಥಿಕ ನೆರವು ಘೋಷಿಸಿದೆ. ಅಲ್ಲದೆ, ಗಂಭೀರವಾಗಿ ಗಾಯಗೊಂಡವರಿಗೆ ತಲಾ 50,000 ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ 25,000 ನೀಡಲಾಗುವುದು ಎಂದು ಘೋಷಿಸಿದೆ.