ಡೈಲಿ ವಾರ್ತೆ:15 ಮೇ 2023

ಬಳ್ಳಾರಿ: ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ಬೆಂಬಲಿಗರಿಂದ ಜೀವ ಬೆದರಿಕೆ, ಇಬ್ಬರ ಬಂಧನ

ಬಳ್ಳಾರಿ: ಚುನಾವಣೆ ಗೆಲುವಿನ ಬಳಿಕ ಶಾಸಕ ನಾಗೇಂದ್ರ ಅವರಿಗೆ ಶುಭಾಶಯ ಕೋರುವ ನೆಪದಲ್ಲಿ ಎದುರು ಬಂದ ನಾಲ್ವರು ಬಿಜೆಪಿ ಕಾರ್ಯಕರ್ತರು ಜೀವ ಬೆದರಿಕೆ ಹಾಕಿದ್ದು, ಇಬ್ಬರನ್ನು ಬಂಧಿಸಲಾಗಿದೆ.

ಜೀವ ಬೆದರಿಕೆ ಹಾಕಿದ ನಾಲ್ವರ ಪೈಕಿ ಇಬ್ಬರನ್ನು ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಯಲ್ಲಿ ಇಬ್ಬರು ಪರಾರಿಯಾಗಿದ್ದಾರೆ.

ಬಂಧಿತರನ್ನು ರಮೇಶ್ ಮತ್ತು ವೆಂಕಟೇಶ್ ಎಂದು ಗುರುತಿಸಲಾಗಿದೆ.
ಮೇ 13ರಂದು ಗೆಲುವು ಸಾಧಿಸಿದ ಬಳಿಕ ಮತ ಎಣಿಕೆ ಕೇಂದ್ರದಿಂದ ಮೆರವಣಿಗೆಯಲ್ಲಿ ಬರುತ್ತಿದ್ದ ಶಾಸಕ ನಾಗೇಂದ್ರ ಅವರಿಗೆ ಬೈಕ್ಗಳಲ್ಲಿ ಬಂದ ನಾಲ್ವರು ಎದುರಾಗಿದ್ದಾರೆ. ಗೆದ್ದ ಸಂತೋಷದಲ್ಲಿದ್ದ ನಾಗೇಂದ್ರ ಅವರು ಈ ನಾಲ್ವರನ್ನು ಮಾತನಾಡಿಸಲು ಮುಂದಾಗಿದ್ದಾರೆ. ಈ ವೇಳೆ ಬೆದರಿಕೆ ಹಾಕಿದ್ದು, ನಾಲ್ವರ ಬಳಿ ಮಾರಕಾಸ್ತ್ರಗಳನ್ನು ನೋಡಿದ ಶಾಸಕರ ಭದ್ರತಾ ಸಿಬ್ಬಂದಿ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮತ್ತಿಬ್ಬರು ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ಬಳ್ಳಾರಿಯ ಕೌಲಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮತ್ತಿಬ್ಬರ ಬಂಧನಕ್ಕೆ ತನಿಖೆ ಕೈಗೊಳ್ಳಲಾಗಿದೆ. ಘಟನೆಯ ಬೆನ್ನಲ್ಲೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಶಾಸಕರಿಗೆ ಎಸ್ಕಾರ್ಟ್ ವ್ಯವಸ್ಥೆ ಮಾಡಿದ್ದಾರೆ.