ಡೈಲಿ ವಾರ್ತೆ:15 ಮೇ 2023

ಬೆಳ್ತಂಗಡಿ: ಬಿಜೆಪಿ ವಿಜಯೋತ್ಸವದ ವೇಳೆ ಮನೆಯಂಗಳಕ್ಕೆ ಪಟಾಕಿ ಎಸೆದು ದಂಪತಿಗೆ ಹಲ್ಲೆ – ಪ್ರಕರಣ ದಾಖಲು

ಬೆಳ್ತಂಗಡಿ: ನೆರಿಯ ಗ್ರಾಮದ ಅಣಿಯೂರು ಎಂಬಲ್ಲಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವದ ಹೆಸರಿನಲ್ಲಿ ಮನೆಯಂಗಳಕ್ಕೆ ಪಟಾಕಿ ಎಸೆದದ್ದಲ್ಲದೆ ಅದನ್ನು ಪ್ರಶ್ನಿಸಿದವರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಮಲಾಕ್ಷ ಗೌಡ ಎಂಬವರ ಮನೆಯ ಅಂಗಳಕ್ಕೆ ಪಟಾಕಿ ಸಿಡಿಸಿದ್ದು ಇದನ್ನು ಪ್ರಶ್ನಿಸಿದಾಗ ಕಮಲಾಕ್ಷ ಗೌಡರಿಗೆ ಹಲ್ಲೆಗೆ ಬಿಜೆಪಿ ಕಾರ್ಯಕರ್ತರು ಮುಂದಾಗಿದ್ದಾರೆ. ಇದನ್ನು ತಡೆಯಲು ಬಂದ ಅವರ ಹೆಂಡತಿಯನ್ನು ಮೈಗೆ ಕೈಹಾಕಿ ದೂಡಿ ಹಾಕಿ ಅವಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ನೆರಿಯ ಗ್ರಾಮದ ಬಿಜೆಪಿ ಮುಖಂಡರುಗಳಾದ ಸಚಿನ್, ಗಣೇಶ್, ಸುದರ್ಶನ ಹಾಗೂ ಧನಂಜಯ ಎಂಬವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಘಟನೆಯ ಬಗ್ಗೆ ದೂರು ನೀಡಿದ ಬಳಿಕ ಆರೋಪಿಗಳು ಬೆಳ್ತಂಗಡಿ ವೃತ್ತ ನೀರಿಕ್ಷಕರ ಕಚೇರಿಯಲ್ಲಿದ್ದರೂ ಅವರನ್ನು ಪೊಲೀಸರು ಬಿಟ್ಟಿರುವುದನ್ನು ವಿರೋಧಿಸಿ ವೃತ್ತ ನಿರೀಕ್ಷರ ವಾಹನವನ್ನು ತಡೆದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.

ಇದೀಗ ಧರ್ಮಸ್ಥಳ ಪೊಲೀಸರು ಘಟನೆಯ ಬಗ್ಗೆ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.