ಡೈಲಿ ವಾರ್ತೆ:28 ಮೇ 2023

ಇನ್ಮುಂದೆ ಕರೆಂಟ್ ಬಿಲ್ ಕಟ್ಟಂಗಿಲ್ಲ ಎಂದು ಡಂಗೂರ ಸಾರಿದ ವ್ಯಕ್ತಿ.!

ದಾವಣಗೆರೆ : ದಾವಣಗೆರೆ ತಾಲ್ಲೂಕಿನ ಗೋಣಿವಾಡ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತಮಟೆ ಬಾರಿಸುತ್ತ ‘ಇವತ್ತಿನಿಂದ ಯಾರೂ ಕರೆಂಟ್ ಬಿಲ್ ಕಟ್ಟಂಗಿಲ್ಲ’ ಎಂಬ ಸಂದೇಶ ಸಾರಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ವ್ಯಕ್ತಿ ‘ಇನ್ಮುಂದೆ ಯಾರೂ ಕರೆಂಟ್ ಬಿಲ್ ಕಟ್ಟಂಗಿಲ್ಲ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ‌ಆರ್ಡರ್‌ ಮಾಡಿ ಕಳುಹಿಸಿದ್ದಾರೆ’ ಎಂದು ಗೋಣಿವಾಡ ಗ್ರಾಮದಲ್ಲಿ ಸಂಚರಿಸಿ ತಮಟೆ ಬಾರಿಸುತ್ತ ಸಂದೇಶ ಸಾರಿದ್ದಾರೆ.

ಈ ಬಗ್ಗೆ ತಹಶೀಲ್ದಾರ್ ಎಂ.ಬಿ.ಅಶ್ವತ್ಥ್, ವಿಡಿಯೋ ಹರಿದಾಡಿರುವ ವಿಷಯ ಗೊತ್ತಾಗಿದೆ. ಆದರೆ ವ್ಯಕ್ತಿ ಯಾರು, ಯಾವ ಕಾರಣಕ್ಕೆ ಎಂಬುದನ್ನು ಪರಿಶೀಲಿಸಲಾಗುವುದು’ ಎಂದು ತಿಳಿಸಿದರು.

ತ್ವರಿತವಾಗಿ ‘ಗ್ಯಾರಂಟಿ’ ಯೋಜನೆಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿರುವ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್‌ನ ನಾಯಕರು ವಿದ್ಯುತ್‌ ಬಿಲ್‌ ಕಟ್ಟಬೇಡಿ ಎಂದು ಕರೆ ನೀಡಿದ ಬೆನ್ನಲ್ಲೇ ವಿದ್ಯುತ್‌ ಬಿಲ್‌ ಕಟ್ಟುವುದಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿರೋಧ ವ್ಯಕ್ತವಾಗುತ್ತಿದೆ.