ಡೈಲಿ ವಾರ್ತೆ:29 ಮೇ 2023

ರೈಲಿನಲ್ಲೇ ನರಳಿ ನರಳಿ ಪ್ರಾಣಬಿಟ್ಟ ಮೂರ್ಛೆ ರೋಗಿ!

ಮಂಡ್ಯ: ರೈಲ್ವೆ ಸಿಬ್ಬಂದಿ ಹಾಗೂ ಪೊಲೀಸರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ರೈಲಿನಲ್ಲಿ ಮೂರ್ಛೆ ರೋಗಿ ನರಳಿ ನರಳಿ ಪ್ರಾಣ ಬಿಟ್ಟಿರುವ ಘಟನೆ ಮೈಸೂರು ಹಾಗೂ ಮಂಡ್ಯ ನಡುವಿನ ರೈಲು ಪ್ರಯಾಣದಲ್ಲಿ ಜರುಗಿದೆ.

ಮೈಸೂರಿನ ರಮಾಬಾಯಿ ನಗರದ ನಿವಾಸಿ ಸ್ವಾಮಿ (83) ಸಾವನ್ನಪ್ಪಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.
ಭಾನುವಾರ ಸಂಜೆ ಮೈಸೂರಿನಿಂದ ಬೆಂಗಳೂರಿಗೆ ಪ್ಯಾಸೆಂಜರ್ ರೈಲಿನಲ್ಲಿ ಸ್ವಾಮಿ ಪ್ರಯಾಣಿಸುತ್ತಿದ್ದರು. ಮೈಸೂರಿನಲ್ಲಿ ರೈಲು ಹತ್ತುತ್ತಿದ್ದಂತೆ ಮೂರ್ಛೆ ಬಂದು ಕುಸಿದು ಬಿದ್ದಿದ್ದಾರೆ. ಸಹ ಪ್ರಯಾಣಿಕರು ಮೈಸೂರಿನಲ್ಲೆ ರೈಲ್ವೆ ಪೊಲೀಸರಿಗೆ, ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಕೊಟ್ಟರೂ ಚಿಕಿತ್ಸೆ ಕೊಡಿಸಲು ಸಿಬ್ಬಂದಿ ಬಂದಿಲ್ಲ. ಮೈಸೂರಿನಲ್ಲಿ ಮೂರ್ಛೆ ರೋಗಿಯನ್ನು ಇಳಿಸದೇ, ಮೈಸೂರಿನಿಂದ ಮಂಡ್ಯವರೆಗೆ ಚಿಕಿತ್ಸೆ ನೀಡದೆ ಕರೆತರಲಾಗಿದೆ. ರೈಲಿನಲ್ಲಿ ಮಂಡ್ಯ ಸಮೀಪ ಬರುತ್ತಿದ್ದಂತೆ ಸ್ವಾಮಿ ಸಾವನ್ನಪ್ಪಿದ್ದಾರೆ. ರೈಲಿನ ಎಲ್ಲ ನಿಲ್ದಾಣದಲ್ಲಿಯೂ ರೈಲ್ವೆ ಪೊಲೀಸರಿಗೂ ತಿಳಿಸಿದರೆ ಚಿಕಿತ್ಸೆ ಕೊಡಿಸಲಿಲ್ಲ ಎಂದು ಸಹ ಪ್ರಯಾಣಿಕರು ಆರೋಪ ಮಾಡಿದ್ದಾರೆ.

ಈ ಸಾವಿಗೆ ರೈಲ್ವೆ ಅಧಿಕಾರಿಗಳು ಹಾಗೂ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.