ಡೈಲಿ ವಾರ್ತೆ: 04 ಜೂನ್ 2023

ಹುಟ್ಟು ಹಬ್ಬದ ದಿನವೇ ಕಾಂಪೌಂಡ್ ಕುಸಿದುಬಿದ್ದು ಬಾಲಕ ಮೃತ್ಯು!

ದಾವಣಗೆರೆ: ಹುಟ್ಟುಹಬ್ಬದ ದಿನದಂದೇ ಕೌಂಪೌಂಡ್ ಕುಸಿದುಬಿದ್ದು ಬಾಲಕ ಸಾವನ್ನಪ್ಪಿದ ಘಟನೆ ದಾವಣಗೆರೆಯ ಬಸಾಪುರ ಗ್ರಾಮದಲ್ಲಿ ನಡೆದಿದೆ.

ನಾಗಾರ್ಜುನ (11) ಮೃತ ಬಾಲಕ. ಈತ ಬಸಪುರ ಗ್ರಾಮದ ಗುರು ಶಾಂತಯ್ಯ ಎಂಬವರ ಪುತ್ರನಾಗಿದ್ದು, ಪಕ್ಕದ ಮನೆಗೆ ಆಟವಾಡಲು ತೆರಳಿದ್ದ ವೇಳೆ ಶಿಥಿಲಾವಸ್ಥೆಯಲ್ಲಿದ್ದ ಮನೆಯ ಕೌಂಪೌಂಡ್ ಗೋಡೆ ಕುಸಿದುಬಿದ್ದು ಮೃತಪಟ್ಟಿದ್ದಾನೆ. ನಾಗಾರ್ಜುನ ತನ್ನ 12ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುವ ಖುಷಿಯಲ್ಲಿದ್ದ. ಅದಕ್ಕಾಗಿ ಕುಟುಂಬಸ್ಥರು ರಾತ್ರಿಯೇ ಮನೆಗೆ ಕೇಕ್ ತಂದು ರಾತ್ರಿ 12ಕ್ಕೆ ಸರಿಯಾಗಿ ಮಗನ ಹುಟ್ಟುಹಬ್ಬ ಆಚರಿಸಲು ಸಿದ್ಧತೆ ನಡೆಸಿದ್ದರು.

ನಾಗಾರ್ಜುನ್ 9 ಗಂಟೆಯ ಸುಮಾರಿಗೆ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದ ಸಂದರ್ಭ ಗೋಡೆ ಕುಸಿದು ದುರ್ಘಟನೆ ಸಂಭವಿಸಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮನೆಯ ಮಾಲೀಕ ಸಿದ್ದಪ್ಪ ಅವರ ವಿರುದ್ಧ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏಕಾಏಕಿ ಕೌಂಪೌಂಡ್ ಕುಸಿದು ಬಿದ್ದ ಪರಿಣಾಮ ಕಬ್ಬಿಣದ ಗೇಟ್ ಬಾಲಕನ ತಲೆಗೆ ಬಡಿದು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಗಾರ್ಜುನನ ಪೋಷಕರು ಬಡವರಾಗಿದ್ದು, ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.