ಡೈಲಿ ವಾರ್ತೆ:18 ಜೂನ್ 2023

ತೀರ್ಥಹಳ್ಳಿ ತುಂಗಾ ನದಿಯಲ್ಲಿ
ಈಜಲು ತೆರಳಿದ್ದ ನಿಟ್ಟೆ ಖಾಸಗಿ ಕಾಲೇಜಿನ ಇಬ್ಬರು ಉಪನ್ಯಾಸಕರು ನೀರುಪಾಲು – ಓರ್ವನ ಶವ ಪತ್ತೆ

ತೀರ್ಥಹಳ್ಳಿ : ಇಲ್ಲಿನ ತೀರ್ಥಮತ್ತೂರಿನಲ್ಲಿ ಈಜಲು ಇಳಿದ ಇಬ್ಬರು ಉಪನ್ಯಾಸಕರು ನೀರು ಪಾಲಾಗಿರುವ ಘಟನೆ ಇಂದು ಭಾನುವಾರ ನಡೆದಿದೆ.

ತೀರ್ಥಮತ್ತೂರು ಬಳಿ 8-10 ಜನ ಉಪನ್ಯಾಸಕರು ತುಂಗ ನದಿಗೆ ಇಳಿದಾಗ ಓರ್ವ ಉಪನ್ಯಾಸಕ ನೀರು ಪಾಲಾಗಿದ್ದು ಅವರನ್ನು ರಕ್ಷಿಸಲು ಮತ್ತೋರ್ವ ಉಪನ್ಯಾಸಕ ಮುಂದಾಗಿದ್ದು ಅವರೂ ಸಹ ನೀರು ಪಾಲಾಗಿದ್ದಾರೆ.

ನಿಟ್ಟೆ ಕಾಲೇಜಿನ ಉಪನ್ಯಾಸಕರಾದ ಪುನೀತ್ (38) ಮತ್ತು ಬಾಲಾಜಿ(36) ನೀರುಪಾಲಾದ ದುರ್ದೈವಿಗಳು ಎಂದು ತಿಳಿದು ಬಂದಿದೆ.

ದಕ್ಷಿಣ ಕನ್ನಡದ ನಿಟ್ಟೆ ಕಾಲೇಜಿನ 8 ರಿಂದ 10 ಜನ ಉಪನ್ಯಾಸಕರು ತೀರ್ಥಮತ್ತೂರಿನ ಯೋಗ ನರಸಿಂಹ ಮಠಕ್ಕೆ ಆಗಮಿಸಿದ್ದರು. ಇಂದು ಮುಂಜಾನೆ ತುಂಗಾ ನದಿಗೆ ಸ್ನಾನಕ್ಕೆ ಇಳಿದಿದ್ದಾರೆ. ಈ ಸಂಧರ್ಭದಲ್ಲಿ ಇಬ್ಬರು ನೀರು ಪಾಲಾಗಿದ್ದಾರೆ. ಓರ್ವನ ಮೃತ ದೇಹ ಪತ್ತೆಯಾಗಿದ್ದು ಮತ್ತೋರ್ವರ ಮೃತದೇಹ ಶೋಧ ಕಾರ್ಯ ಮುಂದುವರೆದಿದೆ.

ಅಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಯುತ್ತಿದೆ. ತೀರ್ಥಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.