ಡೈಲಿ ವಾರ್ತೆ:22 ಜೂನ್ 2023

ತೆಂಗಿನ ಕಾಯಿ ಗೊನೆ ಬಿದ್ದು 16 ವರ್ಷದ ಬಾಲಕ ಮೃತ್ಯು!

ಶ್ರವಣಬೆಳಗೊಳ: ತೆಂಗಿನ ಕಾಯಿ ಗೊನೆ ಬಿದ್ದು ಕಾಲೇಜು ವಿದ್ಯಾರ್ಥಿ ಪ್ರಜ್ವಲ್ (16) ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.

ಶ್ರವಣಬೆಳಗೊಳ ಹೊರ ವಲಯದ ಉತ್ತೇನಹಳ್ಳಿಯ ರವಿ ಮತ್ತು ಅನಸೂಯ ದಂಪತಿ ಬರಾಳು ಬಳಿ ಇರುವ ಬಿ.ಚೋಳೇನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದರು. ಎಂದಿನಂತೆ ಪ್ರತಿನಿತ್ಯ ಪ್ರಜ್ವಲ್ ತೋಟದ ಕೆಲಸ ಮುಗಿಸಿ ಕಾಲೇಜಿಗೆ ಹೋಗುತ್ತಿದ್ದ. ಅದೇ ರೀತಿ ಗುರುವಾರ ಮಳೆಯಾದ ಹಿನ್ನೆಲೆಯಲ್ಲಿ ಮಳೆ ಗಾಳಿಗೆ ಮರದಿಂದ ತೆಂಗಿನಕಾಯಿಗಳು ಬಿದ್ದಿದ್ದು, ಅವುಗಳನ್ನು ಒಂದೆಡೆ ಸಾಗಿಸುತ್ತಿದ್ದ ವೇಳೆ ಮರದ ಮೇಲಿಂದ ತೆಂಗಿನಕಾಯಿಗಳ ಗೊನೆ ಏಕಾಏಕಿ ಈತನ ಮೇಲೆ ಬಿದ್ದು, ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.

ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.

ಪ್ರಜ್ವಲ್ ಶ್ರವಣಬೆಳಗೊಳದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಯಲ್ಲಿ ಓದುತ್ತಿದ್ದ. ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿತ್ತು.
ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.