ಡೈಲಿ ವಾರ್ತೆ: 23 ಜೂನ್ 2023

ಸಾಕು ನಾಯಿಯನ್ನು ಕೊಂದ ಚಿರತೆಯನ್ನು ಹತ್ಯೆಗೈದ ವ್ಯಕ್ತಿಯ ಬಂಧನ!

ಚಾಮರಾಜನಗರ: ಸಾಕು ನಾಯಿ ಕೊಂದಿದ್ದ ಮೂರು ವರ್ಷದ ಹೆಣ್ಣು ಚಿರತೆಯೊಂದನ್ನು ಓರ್ವ ವ್ಯಕ್ತಿ ಹತ್ಯೆ ಮಾಡಿರುವಂತಹ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ವ್ಯಾಪ್ತಿಯ ಕೂತನೂರು ಗ್ರಾಮದಲ್ಲಿ ನಡೆದಿದೆ.

ಮಲ್ಲಯ್ಯನಪುರ ಗ್ರಾಮದ ರಮೇಶ್ ಎಂಬಾತ ಈ ಕೃತ್ಯವೆಸಗಿದ್ದಾನೆ. ಜಮೀನು ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ ರಮೇಶ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಜಿ.ಆರ್. ಗೋವಿಂದರಾಜು ಎಂಬವರ ಜಮೀನಿನಲ್ಲಿ ಚಿರತೆ ಕಳೇಬರ ಪತ್ತೆ ಆಗಿದೆ.
ನಾಲ್ಕು ದಿನಗಳ ಹಿಂದೆ ಸಾಕು ನಾಯಿಯನ್ನು ಚಿರತೆ ಕೊಂದು ಹಾಕಿದೆ. ಚಿರತೆ ಮೇಲಿನ ಸೇಡು ತೀರಿಸಿಕೊಳ್ಳಲು ಮೃತ ನಾಯಿಯ ಕಳೇಬರದ ಮೇಲೆ ಕೀಟನಾಶಕ ಔಷಧಿ ಸಿಂಪಡಿಸಿದ್ದ. ಚಿರತೆಯು ಮತ್ತೆ ಬಂದು ಮೃತದೇಹವನ್ನು ತಿಂದಿದ್ದರಿಂದ ಮೃತಪಟ್ಟಿದೆ. ಮರಣೋತ್ತರ ಪರೀಕ್ಷೆ ಬಳಿಕ ಚಿರತೆ ಕಳೇಬರವನ್ನು ಅರಣ್ಯಾಧಿಕಾರಿಗಳು ಸುಟ್ಟುಹಾಕಿದ್ದಾರೆ.