ಡೈಲಿ ವಾರ್ತೆ:23 ಜೂನ್ 2023

ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ: ಹೈಕಮಾಂಡ್‌ಗೆ ಸೋಮಣ್ಣ ಮನವಿ

ಬೆಂಗಳೂರು: ನನಗೂ ಒಂದು ಅವಕಾಶ ಮಾಡಿಕೊಡಿ. ನೂರು ದಿನಗಳ ಕಾಲ ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಸಾಕು ಎಂದು ಮಾಜಿ ಸಚಿವ ವಿ.ಸೋಮಣ್ಣ ಬಿಜೆಪಿ ಹೈಕಮಾಂಡ್‌ಗೆ ಮನವಿ ಮಾಡಿದರು.

ನಗರದಲ್ಲಿ ಮಾತನಾಡಿದ ಅವರು, ಎರಡು ಬಾರಿ ನಾನು ದೆಹಲಿಗೆ ಹೋಗಿ ಬಂದಿದ್ದೇನೆ. ವರಿಷ್ಠರ ಭೇಟಿ ಮಾಡಿ ಕೆಲ ಸಂಗತಿಗಳ ಬಗ್ಗೆ ಹೇಳಿ ಬಂದಿದ್ದೇನೆ. ನಾನು 45 ವರ್ಷ ರಾಜಕಾರಣ ಅನುಭವದ ಆಧಾರದ ಮೇಲೆ ನನ್ನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಎಂದು ಕೇಳಿದ್ದೇನೆ. ಪತ್ರವನ್ನು ಕೂಡ ನಾನು ಬರೆದಿದ್ದೇನೆ. ಪಕ್ಷ ಕೊಟ್ಟ ಎಲ್ಲ ಟಾಸ್ಕ್‌ಗಳನ್ನು ಸ್ವೀಕಾರ ಮಾಡಿ ಅತ್ಯಂತ ಶ್ರಮಪಟ್ಟು ಎಲ್ಲವನ್ನೂ ನಿರ್ವಹಣೆ ಮಾಡಿದ್ದೇನೆ ಎಂದು ತಿಳಿಸಿದರು.

ಮೊನ್ನೆಯ ಚುನಾವಣೆಯಲ್ಲಿ ಸಾಕಷ್ಟು ಹಿನ್ನಡೆ ಆಗಿದೆ. ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವ ಶಕ್ತಿ ಇದೆಯಾ ಎಂದು ಕೆಲವರು ಮಾತಾಡಿಕೊಳ್ಳಬಹುದು. ಆದರೆ ನಾನು ಪಕ್ಷದಲ್ಲಿ ಹಿರಿಯನಿದ್ದೇನೆ. ಎಲ್ಲರನ್ನು ನಾನು ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ. ದೊಡ್ಡವರ ಥರನೇ ನನ್ನದು ಒಂದು ತೆರೆದ ಪುಸ್ತಕ. 43 ದಿನ 50 ಡಿಗ್ರಿ ಬಿಸಿಲಲ್ಲಿ ಓಡಾಡಿ ಉಪ ಚುನಾವಣೆಗಳನ್ನು ಗೆಲ್ಲಿಸಿದ್ದೇನೆ. ಪಕ್ಷದ ಬಹುತೇಕ ನಾಯಕರಿಗೆ ನಾನು ವಿನಂತಿ ಮಾಡಿದ್ದೇನೆ. ನನಗೂ ಒಂದೂವರೆ ತಿಂಗಳಿಂದ ಯಾವುದೇ ಕೆಲಸ ಇಲ್ಲ. ನನಗೂ ಒಂದು ಅವಕಾಶ ಮಾಡಿಕೊಡಿ. ನೂರು ದಿನಗಳ ಕಾಲ ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿ ಸಾಕು ಎಂದು ಆಗ್ರಹಿಸಿದರು.

ಪಕ್ಷದ ಸಂಘಟನೆಯಲ್ಲಿ ಯಾವ ರೀತಿ ತೊಡಗಿಸಿಕೊಳ್ಳಬಹುದು ಎಂದು ತೋರಿಸಿಕೊಡ್ತೀನಿ. ಪ್ರಧಾನಿಗಳನ್ನು ಹೊರತುಪಡಿಸಿ ಎಲ್ಲರನ್ನೂ ಭೇಟಿಯಾಗಿದ್ದೇನೆ. ಅಮಿತ್ ಶಾ, ಜೆ.ಪಿ.ನಡ್ಡಾ, ಬಿ.ಎಲ್. ಸಂತೋಷ್ ಸೇರಿ ಎಲ್ಲರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದರು.

ನಾನು ಚುನಾವಣೆಗೆ ಮುನ್ನವೇ ರಾಜ್ಯಾಧ್ಯಕ್ಷ ಸ್ಥಾನ ಕೇಳಿದ್ದೇನೆ. ನನಗೆ ನೂರು ದಿನ ಕೊಡಲಿ. ನಾನೇನು ಹೇಡಿ ಅಲ್ಲ. ನಾನು ಯಾವುದೇ ಹುದ್ದೆ ತೆಗೆದುಕೊಳ್ಳುವುದಾದರೂ ಅದನ್ನು ಚಾಲೆಂಜ್ ಆಗಿ ತೆಗೆದುಕೊಳ್ಳುತ್ತೇನೆ. ಅಶೋಕ್ ರಾಜ್ಯಾಧ್ಯಕ್ಷ ಆದರೆ ಬೇಡ ಅಂತೀವಾ? ನನ್ನ ಕಾರ್ಯವೈಖರಿಯೇ ಬೇರೆ. ನಾನು ತಗೊಂಡಿರುವ ರಿಸ್ಕ್ ಇವರು ಯಾರು ತಗೊಂಡಿಲ್ಲ. ಕನಕಪುರದಲ್ಲಿ ಅಶೋಕ್ ರಿಸ್ಕ್ ತಗೊಂಡಿಲ್ಲ ಎಂದು ಜನರೇ ಮಾತಾಡಿಕೊಳ್ತಿದ್ದಾರೆ. ನಾನು ಪಕ್ಷದಲ್ಲಿ ತಗೊಂಡಿರೋ ಒಂದು ಚಾಲೆಂಜ್‌ನ್ನು ಇವರು ಯಾವುದಾದರೂ ಒಂದು ತಗೊಂಡಿದ್ದೀರಾ ಕೇಳಿ ಎಂದು ಅಶೋಕ್‌ ವಿರುದ್ಧ ಗುಡುಗಿದರು.
ನಾನು ಉಪಚುನಾವಣೆ ಸೇರಿ ಹಲವು ಚುನಾವಣೆಗಳನ್ನು ಚಾಲೆಂಜ್ ಆಗಿ ತಗೊಂಡಿದ್ದೇನೆ. ಇವರೆಲ್ಲರಿಗಿಂತ ನಾನು ಚೆನ್ನಾಗಿ ಕೆಲಸ ಮಾಡಿದ್ದೇನೆ. ಸಿದ್ದರಾಮಯ್ಯ ವಿರುದ್ಧ ಚುನಾವಣೆಯಲ್ಲಿ ನಿಲ್ಲೋಕೆ ನನಗೇನು ಹುಚ್ಚು ಹಿಡಿದಿತ್ತ? ನಾನು ರಾಜ್ಯಾಧ್ಯಕ್ಷ ಆಗುವುದಕ್ಕೆ ಯಡಿಯೂರಪ್ಪನವರು ಒಪ್ಕೋಬೇಕು. ಬೇರೆಯವರೂ ಒಪ್ಪಬೇಕು. ನಾವು ಇಷ್ಟು ದಿನ ಯಡಿಯೂರಪ್ಪ ಹೇಳಿದ್ದನ್ನು ಕೇಳಿಲ್ವಾ? ಚುನಾವಣೆ ಮುಗಿದ ನಂತರ ಒಂದು ಫೋನ್ ಕೂಡ ಅವರು ಮಾಡಿಲ್ಲ ನನಗೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಯಾವ ನಾಯಕರ ಜೊತೆಗೂ ನಾನು ಮಾತಾಡಿಲ್ಲ. ಇವರ ಕೈಯಲ್ಲಿ ಕಿಸಿಯಲು ಆಗದೇ ಇರುವ ಕೆಲಸ ನಾನು ಮಾಡಿದ್ದೇನೆ. ಪ್ರಾಣದ ಹಂಗು ತೊರೆದು ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ. ನನ್ನ ಸರ್ವೀಸ್‌ನ್ನು ಉಪಯೋಗಿಸಿ, ಆದರೆ ಕಡೆಗಣಿಸಬೇಡಿ. ನಾನು ಸೋತಿರಬಹುದು, ಆದರೆ ನನಗೆ ಕೊಟ್ಟ ಟಾಸ್ಕ್‌ನಲ್ಲಿ ಸೋತಿಲ್ಲ ಗೆದ್ದಿದ್ದೇನೆ. ಸೋಲಿನ ಬಗ್ಗೆ ಯಾರಿಗೆ ತಿಳಿಸಬೇಕೋ ಅವರಿಗೆ ನಾನು ತಿಳಿಸಿದ್ದೇನೆ. ನಾನು ನಾನೇ, ನನ್ನ ಸ್ಟೈಲೇ ಬೇರೆ ಎಂದರು.