ಡೈಲಿ ವಾರ್ತೆ: 25 ಜೂನ್ 2023

ಹೊನ್ನಾವರ: ವಿಚಾರಣೆಗೆ ಕರೆತಂದ ಆರೋಪಿ ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆ; ಪಿಐ, ಪಿಎಸ್ಐ ಸೇರಿ ಐವರು ಸಸ್ಪೆಂಡ್‌

ಕಾರವಾರ: ಕಳ್ಳತನದ ಆರೋಪದ ಮೇಲೆ ವಿಚಾರಣೆಗೆ ಕರೆತಂದ ಆರೋಪಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಠಾಣಾ ಪಿಐ, ಪಿಎಸ್‌ಐ ಸೇರಿ ಐವರು ಅಮಾನತುಗೊಂಡಿದ್ದಾರೆ ಎಂದು ವರದಿಯಾಗಿದೆ.

ಮೃತ ಆರೋಪಿ ಬಿಹಾರ ಮೂಲದ ವ್ಯಕ್ತಿಯಾಗಿದ್ದು, ಪಾಲೀಷ್ ಮಾಡುವ ನೆಪದಲ್ಲಿ ಚಿನ್ನ ಕದಿಯುತ್ತಿದ್ದ ಆರೋಪದ ಮೇಲೆ ಬಿಹಾರ ಮ಼ೂಲದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆದರೆ ದಿಲೀಪ ಮಂಡಲ್ ಎಂಬಾತ ನಿನ್ನೆ ವಿಷ ಸೇವಿಸಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.

ಈ ಪ್ರಕರಣದಲ್ಲಿ ಬಿಹಾರ ಮೂಲದ ಇಬ್ಬರನ್ನು ವಶಕ್ಕೆ ಪಡೆದಿದ್ದ ಪೊಲೀಸರು ನಿನ್ನೆ, ಶನಿವಾರ ವಿಚಾರಣೆಗಾಗಿ ಹೊನ್ನಾವರ ಠಾಣೆಗೆ ಕರೆತಂದಿದ್ದರು. ಈ ವೇಳೆ ಆರೋಪಿ ಬಾಯಾರಿಕೆಯೆಂದು ನೀರು ಕುಡಿಯಲು ಹೋಗಿದ್ದ ವೇಳೆ ನೀರಿನೊಂದಿಗೆ ವಿಷ ಬೆರೆಸಿ ಸೇವನೆ ಮಾಡಿದ್ದಾನೆ, ಕೃತ್ಯ ಗಮನಕ್ಕೆ ಬರುತ್ತಿದ್ದಂತೆ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಆರೋಪಿ ಮೃತಪಟ್ಟಿದ್ದ.
ಪೊಲೀಸ್ ಠಾಣೆಯಲ್ಲಿ ವಿಷ ಸೇವಿಸಿ ಮೃತಪಟ್ಟ ಹಿನ್ನೆಲೆಯಲ್ಲಿ ಎಸ್‌ಪಿ ಹಾಗೂ ಇತರ ಪೊಲೀಸ್‌ ಅಧಿಕಾರಿಗಳು ಹೊನ್ನಾವರ ಠಾಣೆಗೆ ಭೇಟಿ ನೀಡಿದ್ದರು.
ಈಗ ಈ ಪ್ರಕರಣದಲ್ಲಿ ಹೊನ್ನಾವರ ಠಾಣೆಯ ಪಿ.ಐ ಮಂಜುನಾಥ, ಠಾಣೆಯ ಕ್ರೈಂ ಪಿ.ಎಸ್.ಐ ಮಂಜೇಶ್ವರ ಚಂದಾವರ, ಪೊಲೀಸ್ ಸಿಬ್ಬಂದಿ ಮಹಾವೀರ, ರಮೇಶ, ಸಂತೋಷ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.