ಡೈಲಿ ವಾರ್ತೆ: 25 ಜೂನ್ 2023

ಕ್ಷುಲ್ಲಕ ವಿಚಾರಕ್ಕೆ ಪತಿ, ಪತ್ನಿ ಜಗಳ:ಆತ್ಮಹತ್ಯೆಗೆ ನೀರಿನ ಗುಂಡಿಗೆ ಹಾರಿದ ಪತ್ನಿಯನ್ನು ರಕ್ಷಿಸಲು ನೀರಿಗೆ ಧುಮುಕಿದ ಪತಿಯೂ ಸಾವು!

ಕಾರ್ಕಳ: ದಂಪತಿ ನಡುವೆ ನಡೆದ ಜಗಳ ಸಾವಿನಲ್ಲಿ ಅಂತ್ಯವದ ಘಟನೆ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಯಶೋಧ ಮತ್ತು ಇಮ್ಯಾನುಲ್ ಎಂದು ಗುರುತಿಸಲಾಗಿದೆ. ದಂಪತಿಯು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮೂಲದವರಾಗಿದ್ದು, ತೋಟದ ಕೆಲಸಕ್ಕೆ ಬಂದು ಕಾರ್ಕಳದ ನಲ್ಲೂರಿನಲ್ಲಿ ನೆಲೆಸಿದ್ದರು. ಸದ್ಯ ದಂಪತಿ ಸಾವಿನಿಂದ ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.

ಸಣ್ಣ ವಿಚಾರಕ್ಕೆ ಪತಿ ಹಾಗೂ ಪತ್ನಿ ನಡುವೆ ಜಗಳ ನಡೆದಿತ್ತು. ಇದೇ ಬೇಸರದಿಂದ ಪತ್ನಿ ಮನೆ ಸಮೀಪದಲ್ಲಿದ್ದ ನೀರು ತುಂಬಿದ್ದ ಗುಂಡಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ಪತಿ ಆಕೆಯನ್ನು ರಕ್ಷಣೆ ಮಾಡುವ ಸಲುವಾಗಿ ನೀರಿಗೆ ಧುಮುಕಿದ್ದಾರೆ. ಪರಿಣಾಮ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಕೂಡಲೇ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಸುಮಿತ್ ನಲ್ಲೂರು ಮತ್ತು ಗೆಳೆಯರು ಧಾವಿಸಿ ಇಬ್ಬರ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ. ಕಾರ್ಕಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.