ಡೈಲಿ ವಾರ್ತೆ:30 ಜೂನ್ 2023

ಎರಡು ಆಟೋ ರಿಕ್ಷಾ ಹಾಗೂ ಟ್ರಕ್ ನಡುವೆ ಭೀಕರ ಸರಣಿ ಅಪಘಾತ 7 ಮಂದಿ ಮೃತ್ಯು!

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ಕಾರಿಗನೂರು ಎಂಬಲ್ಲಿ ಶುಕ್ರವಾರ ಮಧ್ಯಾಹ್ನ ಆಟೊಗೆ ಟ್ರಕ್‌ ಡಿಕ್ಕಿ ಹೊಡೆದು, ಆಟೊ ಸೇತುವೆಯ ಕೆಳಗೆ ಬಿದ್ದಿದ್ದು, ಘಟನೆಯಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.

‘ಆಟೊದಲ್ಲಿದ್ದ ಎಲ್ಲಾ ಏಳು ಮಂದಿ ಮೃತಪಟ್ಟಿದ್ದಾರೆ. ಉಕ್ಕಿನ ಸರಳು ಸಾಗಿಸುವ ಖಾಲಿ ಟ್ರಕ್‌ ಆಟೊಗೆ ಡಿಕ್ಕಿ ಹೊಡೆದು ಈ ದುರಂತ ಸಂಬವಿಸಿದೆ’ ಎಂದು ಎಸ್‌‍ಪಿ ಶ್ರೀಹರಿಬಾಬು ಬಿ.ಎಲ್‌. ತಿಳಿಸಿದರು.

ಮೃತಪಟ್ಟವರ ವಿವರ ಪಡೆಯಲಾಗುತ್ತಿದೆ. ಸದ್ಯ ಹೊಸಪೇಟೆ ಜಿಲ್ಲಾ ಆಸ್ಪತ್ರೆಯಲ್ಲಿ ಶವಗಳನ್ನು ಇರಿಸಲಾಗಿದೆ ಎಂದು ಅವರು ತಿಳಿಸಿದರು.

ಹೊಸಪೇಟೆ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.

ಮೃತರು ಬಳ್ಳಾರಿಯವರು?:
ಹೊಸಪೇಟೆ ಸಮೀಪ ಸಂಭವಿಸಿದ ಅಪಘಾರದಲ್ಲಿ ಮೃತಪಟ್ಟವರು ಬಳ್ಳಾರಿಯವರು ಎಂದು ಹೇಳಲಾಗುತ್ತಿದೆ.
’ಟ್ರಕ್‌ ಒಟ್ಟು ಎರಡು ರಿಕ್ಷಾಗಳಿಗೆ ಡಿಕ್ಕಿ ಹೊಡೆದಿತ್ತು. ಎರಡೂ ರಿಕ್ಷಾಗಳಲ್ಲಿ ಒಟ್ಟು 19 ಮಂದಿ ಇದ್ದರು. ಒಂದು ರಿಕ್ಷಾದಲ್ಲಿದ್ದ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತರ 12 ಮಂದಿ ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಬೀರವಾಗಿದೆ. ಅವರನ್ನು ಬಳ್ಳಾರಿಗೆ ಕಳುಹಿಸಲಾಗಿದೆ. ಉಳಿದವರು ಹೊಸಪೇಟೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತಪಟ್ಟವರ ಗುರುತು ಪತ್ತೆ ಹಚ್ಚಲು ಆಧಾರ್‌ ಮತ್ತಿತರ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗುತ್ತಿದೆ‘ ಎಂದು ಪೊಲೀಸ್ ಮೂಲಗಳು ತಿಳಿಸಿವೆ.