ಡೈಲಿ ವಾರ್ತೆ: 5 ಜುಲೈ 2023

ತೆಕ್ಕಟ್ಟೆ:ಬಾರಿ ಮಳೆಗೆ ಸ್ಕೂಟಿ ಸವಾರನೋರ್ವ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕೆರೆಗೆ ಸ್ಕೂಟಿ ಸಮೇತ ಬಿದ್ದು ಸವಾರ ಮೃತ್ಯು!

ವಿಡಿಯೋ ವೀಕ್ಷಿಸಿ

ಕೋಟ: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸ್ಕೂಟಿಯೊಂದು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕೆರೆಗೆ ಬಿದ್ದ ಪರಿಣಾಮ ಸವಾರ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತೆಕ್ಕಟ್ಟೆ ಸಮೀಪದ ಮಲ್ಯಾಡಿ ಎಂಬಲ್ಲಿ ಮಂಗಳವಾರ ಮಧ್ಯರಾತ್ರಿ ವೇಳೆ ನಡೆದಿದೆ.

ಮೃತರನ್ನು ಸ್ಥಳಿಯ ನಿವಾಸಿ ದಿವಾಕರ್ ಶೆಟ್ಟಿ( 45) ಎಂದು ಗುರುತಿಸಲಾಗಿದೆ.
ಇವರು ತನ್ನ ಸ್ಕೂಟಿಯಲ್ಲಿ ರಾತ್ರಿ ಮನೆಗೆ ಬರುತ್ತಿದ್ದಾಗ ವೇಳೆ ಮನೆ ಸಮೀಪದ ರಸ್ತೆಯ ತಿರುವಿನಲ್ಲಿ ಭಾರಿ ಮಳೆಯಿಂದಾಗಿ ನಿಯಂತ್ರಣ ತಪ್ಪಿ ರಸ್ತೆ ಬದಿ ಯಾವುದೇ ತಡೆಗೋಡೆ ಇಲ್ಲದ ಸುಮಾರು 15ರಿಂದ 20 ಅಡಿ ಆಳದ ಕೆರೆಗೆ ಸ್ಕೂಟಿ ಸಮೇತ ಬಿದ್ದರೆನ್ನಲಾಗಿದೆ.

ಕೂಡಲೇ ಗಮನಿಸಿದ ಸ್ಥಳೀಯರು ಪೊಲೀಸರಿಗೆ ಅಗ್ನಿಶಾಮಕ ದಳ ಹಾಗೂ ಮುಳುಗುತಜ್ಞ ಈಶ್ವರ ಮಲ್ಪೆ ಮತ್ತು ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಈಶ್ವರ ಮಲ್ಪೆ ಹಾಗೂ ನಾಗರಾಜ್ ಪುತ್ರನ್ ಕೆರೆಗೆ ಧುಮುಕಿ ಮೊದಲು ಸ್ಕೂಟರ್ ಅನ್ನು ಮೇಲಕ್ಕೆ ಎತ್ತಿದರು. ನಂತರ ಸತತವಾಗಿ ಒಂದು ಗಂಟೆಕಾಲ ಹುಡುಕಾಟ ನಡೆಸಿ ಇಂದು ನಸುಕಿನ ವೇಳೆ 1:30ರ ಸುಮಾರಿಗೆ ಮೃತದೇಹವನ್ನು ಮೇಲಕ್ಕೆ ತಂದರು ಎಂದು ತಿಳಿದುಬಂದಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.