ಡೈಲಿ ವಾರ್ತೆ: 14 ಜುಲೈ 2023

ಹಾರ್ನ್ ಹಾಕಿದ್ದಕ್ಕೆ ಕಾರಿನ ಗಾಜು ಒಡೆದು ಹಾಕಿದ ದುಷ್ಕರ್ಮಿಗಳು

ಬೆಂಗಳೂರು;ಹಾರ್ನ್ ಹಾಕಿದ್ದಕ್ಕೆ ಕಾರು ಸವಾರನ ಮೇಲೆ ದ್ವಿಚಕ್ರವಾಹನ ಸವಾರರ ಗುಂಪು ಕೋಪಗೊಂಡು ಕಾರಿನ ಗಾಜು ಒಡೆದು ವಾಹನವನ್ನು ಧ್ವಂಸಗೊಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ದಾಳಿಯ ದೃಶ್ಯ ಕಾರಿನ ಡ್ಯಾಶ್‌ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಧ್ಯಾಹ್ನ 2.30ರ ಸುಮಾರಿಗೆ ಗುಂಜೂರು ಮುಖ್ಯರಸ್ತೆಯಲ್ಲಿ ಅಡ್ಡಾದಿಡ್ಡಿ ರೀತಿಯಲ್ಲಿ ಬೈಕ್‌ ಗಳನ್ನು ಯುವಕರು ಓಡಿಸುತ್ತಿದ್ದರು. ಈ ವೇಳೆ ಹಾರ್ನ್ ಹಾಕಿ ಕಾರು ಮುಂದಕ್ಕೆ ಚಲಿಸಲು ದಾರಿ ಬಿಡುವಂತೆ ಕಾರಿನ ಚಾಲಕ ಮನವಿ ಮಾಡಿದ್ದಾರೆ. ಇದಕ್ಕೆ ಬೈಕ್ ನಲ್ಲಿ ಚಲಿಸುತ್ತಿದ್ದ ಯುವಕರ ಗುಂಪು ಸಿಟ್ಟುಗೊಂಡು ತಮ್ಮ ಬೈಕ್‌ಗಳನ್ನು ಕಾರಿನ ಮುಂದೆ ತಡೆದು ಚಾಲಕನನ್ನು ನಿಂದಿಸಿ ದಾಳಿಗೆ ಮುಂದಾಗಿದ್ದಾರೆ.

ಒಂದು ಹಂತದಲ್ಲಿ ಬೈಕ್ ಸವಾರನೊಬ್ಬ ಕಾರಿಗೆ ಢಿಕ್ಕಿ ಹೊಡೆದಿದ್ದು, ಪರಿಸ್ಥಿತಿ ಕೈ ತಪ್ಪುತ್ತಿರುವುದನ್ನು ಗಮನಿಸಿದ ಕಾರು ಚಾಲಕ ಸ್ಥಳದಿಂದ ಕಾರನ್ನು ಹಿಂದಕ್ಕೆ ಚಲಾಯಿಸಿದ್ದಾನೆ.
ಆದರೆ ಬೈಕ್‌ ಸವಾರರು ಆತನನ್ನು ಹಿಂಬಾಲಿಸಿ ಅಪಾರ್ಟ್‌ಮೆಂಟ್‌ ಬಳಿ ಮತ್ತೆ ವಾಹನ ತಡೆದು ವಾಹನದ ಗಾಜುಗಳನ್ನು ಒಡೆದು ಹಾಕಿದ್ದಾರೆ.

ಸಂಪೂರ್ಣ ಕೃತ್ಯ ಸಮೀಪದ ಕಟ್ಟಡದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಲಾಗಿತ್ತು.