ಡೈಲಿ ವಾರ್ತೆ: 19 ಜುಲೈ 2023

ಬೆಂಗಳೂರಿನಲ್ಲಿ ಭಾರಿ ಸ್ಫೋಟಕ್ಕೆ ಸಂಚು: ಐವರು ಶಂಕಿತ ಉಗ್ರರ ಬಂಧನ, ತನಿಖೆ ತೀವ್ರ

ಬೆಂಗಳೂರು: ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದ ಆರೋಪದಲ್ಲಿ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬುಧವಾರ ಬಂಧಿಸಿರುವ ಘಟನೆ ಬೆಂಗಳೂರು ನಗರದಲ್ಲಿ ನಡೆದಿದೆ.

ಸುಹೇಲ್, ಉಮರ್, ತಬ್ರೇಜ್, ಮುದಾಸಿರ್, ಪೈಜಲ್ ರಬ್ಬಾನಿ ಎಂಬವರು ಬಂಧಿತ ಆರೋಪಿಗಳಾಗಿದ್ದು, ಈ ಟೀಂನ ಲೀಡರ್ ಎನ್ನಲಾಗಿರುವ ಜುನೈದ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಪೊಲೀಸ್ ಕಮಿಷನರ್ ಬಿ. ದಯಾನಂದ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೆಲವೊಂದು ಖಚಿತ ಮಾಹಿತಿ ಆಧಾರದ ಮೇಲೆ ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತಯಾರಿ ಮಾಡುತ್ತಿದ್ದರು. ಸಮಾಜ ಘಾತುಕ ಶಕ್ತಿಗಳನ್ನ ಮಟ್ಟ ಹಾಕಿದ್ದಾರೆ. 7 ಕಂಟ್ರಿ ಮೇಡ್ ಪಿಸ್ತೂಲ್, 45 ಜೀವಂತ ಗಂಡುಗಳು, ಎರಡು ವಾಕಿಟಾಕಿ ವಶಕ್ಕೆ ಪಡೆದಿರುವುದಾಗಿ ತಿಳಿಸಿದರು.

ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಗಳು 2008ರ ಸರಣಿ ಬಾಂಬ್ ಉಗ್ರ ಟಿ ನಜೀರ್ ಜೊತೆ ಹಾಗೂ ಮತ್ತೊಬ್ಬ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಉಗ್ರನ ಜೊತೆ ಸಂಪರ್ಕ ಹೊಂದಿದ್ದರು. ಐವರು ಶಂಕಿತರು ಈ ಇಬ್ಬರು ಉಗ್ರರ ಸಂಪರ್ಕಕ್ಕೆ ಸಿಕ್ಕಿ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡುತ್ತಿದ್ದರು. ವಿದೇಶದಲ್ಲಿರುವ ಉಗ್ರ ಬ್ಲಾಸ್ಟ್ಗೆ ಬೇಕಾದ ವಸ್ತುಗಳ ಪೂರೈಕೆ ಮಾಡುತ್ತಿದ್ದ. ದೇಶ ವಿರೋಧಿ ಶಕ್ತಿಗಳು ಯಾರಿದ್ದಾರೆ ಎನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಶಂಕಿತರ ಮೇಲೆ ಯುಎಪಿಎ ಆಕ್ಟ್ ಜಾರಿ ಮಾಡಲಾಗಿದೆ. ಉಗ್ರ ಟಿ ನಜೀರ್ ಎಲ್ ಇಟಿ ಸಂಘಟನೆಗೆ ಸೇರಿದ ಉಗ್ರನಾಗಿದ್ದು, ಈತನ ಜೊತೆ ಪರಪ್ಪನ ಅಗ್ರಹಾರ ಜೈಲಿನಿಂದ ಸಂಪರ್ಕ ಬೆಳೆದಿತ್ತು.
ಆರ್ ಟಿ ನಗರ ಕೇಸಲ್ಲಿ ಎ1 ಆರೋಪಿಯಾಗಿದ್ದ ಶಂಕಿತ ಉಗ್ರ ಜುನೈದ್ ಅಹಮದ್, ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾನೆ.

ಜುನೈದ್ ಅಹಮದ್ ಹಾಗೂ ಟಿ ನಾಜಿರ್ ನ ಅಣತಿಯಂತೆ ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡಲಾಗುತ್ತಿತ್ತು. ಸದ್ಯ ಶಂಕಿತರಿಂದ 12 ಮೊಬೈಲ್ ಜಪ್ತಿ ಮಾಡಲಾಗಿದ್ದು, ಇವರು ಮೆಕ್ಯಾನಿಕ್, ಡ್ರೈವರ್ ರೀತಿಯ ಕೆಲಸ ಮಾಡಿಕೊಂಡಿದ್ದರು ಎಂದು ದಯಾನಂದ್ ವಿವರಿಸಿದರು.

ಮೊದಲ ಬಾರಿ ಜೈಲಿಗೆ ಹೋದಾಗ 18 ತಿಂಗಳು ಜೈಲಲ್ಲಿ ಇದ್ದರು. 2020 ರಲ್ಲಿ ಜೈಲಿಗೆ ಹೋದಾಗ 8 ತಿಂಗಳು ಜೈಲಿಗೆ ಹೋಗಿದ್ದರು. ಈ ವೇಳೆ ಉಗ್ರ ಟಿ ನಜೀರ್ ಸಂಪರ್ಕ ಹೊಂದಿದ್ದಾರೆ. ಶಂಕಿತ ಉಗ್ರರಿಗೆ ಹೊರಗಡೆಯಿಂದ ಫಂಡಿಂಗ್ ಆಗಿದೆ. ಲಷ್ಕರ್ ಎ ತೊಯ್ಬಾದ ಟಿ ನಜೀರ್ ನನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲಾಗುವುದು.