ಡೈಲಿ ವಾರ್ತೆ:22 ಜುಲೈ 2023

ಮಣಿಪಾಲ: ವೇಶ್ಯಾವಾಟಿಕೆ ದಂಧೆ – ಇಬ್ಬರ ಬಂಧನ,ಐವರು ಯುವತಿಯರ ರಕ್ಷಣೆ, ವೇಶ್ಯಾವಾಟಿಕೆ ಕಿಂಗ್ ಪಿನ್ ಖಾಲಿದ್ ಬಂಧನಕ್ಕೆ ವ್ಯಾಪಕ ಶೋಧ!

ಉಡುಪಿ: ವೇಶ್ಯಾವಾಟಿಕೆಗೆ ಸಂಬಂಧಿಸಿ ಮಪಾಲದ ವಿದ್ಯಾರತ್ನ ನಗರದಲ್ಲಿರುವ ಮನೆಯೊಂದಕ್ಕೆ ಶುಕ್ರವಾರ ರಾತ್ರಿ ದಾಳಿ ನಡೆಸಿದ ಮಣಿಪಾಲ ಪೊಲೀಸರು ಇಬ್ಬರನ್ನು ಬಂಧಿಸಿ, ಐವರು ಯುವತಿಯರನ್ನು ರಕ್ಷಿಸಿರುವ ಬಗ್ಗೆ ವರದಿಯಾಗಿದೆ.

ಬಂಧಿತರನ್ನು ವೇಶ್ಯಾವಾಟಿಕೆ ವ್ಯವಹಾರ ನಡೆಸುತ್ತಿದ್ದ ಅಬ್ದುಲ್ ಸಲಾಮತ್ ಹಾಗೂ ಚಂದ್ರಹಾಸ ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಎಸ್ ಪಿ ಅಕ್ಷಯ ಹಾಕೆ ಮಚ್ಚೀಂದ್ರ ಮಾರ್ಗದರ್ಶನದಲ್ಲಿ ದಾಳಿ ಮಾಡಿದ ಪೊಲೀಸರು, ಅಬ್ದುಲ್ ಸಲಾಮತ್ ಹಾಗೂ ಚಂದ್ರಹಾಸ ಎಂಬವರನ್ನು ವಶಕ್ಕೆ ಪಡೆದು, ವೇಶ್ಯಾವಾಟಿಕೆ ವ್ಯವಹಾರ ನಡೆಸಲು ಬಳಸಿಕೊಂಡಿದ್ದ 5 ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ. ಇವರಲ್ಲಿ ಮೂವರ ಬೆಂಗಳೂರು ಮೂಲದ ನಿವಾಸಿಗಳಾಗಿದ್ದು, ಇನ್ನಿಬ್ಬರು ಮಹಾರಾಷ್ಟ್ರದ ನಾಸಿಕ್ ಹಾಗೂ ಮುಂಬೈ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

ವೇಶ್ಯಾವಾಟಿಕೆ ವ್ಯವಹಾರಕ್ಕೆ ಬಳಸಿದ 4 ಮೊಬೈಲ್, 1 ಕಾರು, 2 ಬೈಕ್ ಹಾಗೂ 10,000ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅನೈತಿಕ ಚಟುವಡಟಿಕೆ ಮಾಡಲು ವ್ಯಕ್ತಿಗಳಿಂದ ಹಣವನ್ನು ಸಂಗ್ರಹಿಸಿ ಕೊಠಡಿಗಳನ್ನು ಒದಗಿಸಿದ ಪ್ರಮುಖ ಆರೋಪಿ ಖಾಲಿದ್ ಎಂಬಾತ ಸ್ಥಳದಿಂದ ಪರಾರಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.