ಡೈಲಿ ವಾರ್ತೆ:23 ಜುಲೈ 2023

ಭಾರೀ ಮಳೆಯಿಂದ ತುಂಬಿ ಹರಿಯುತ್ತಿದೆ ಮೂಕನಮನೆ ಜಲಪಾತ: ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗನ ರಕ್ಷಣೆ!

ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಮುಂದುವರಿದಿದ್ದು, ಮೂಕನಮನೆ ಜಲಪಾತ ತುಂಬಿ ಹರಿಯುತ್ತಿದೆ.

ಜಲಪಾತ ವೀಕ್ಷಣೆಗೆ ಬಂದು ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗನನ್ನ ರಕ್ಷಣೆ ಮಾಡಲಾಗಿದೆ.

ಶನಿವಾರ ಸಂಜೆ ಬೆಂಗಳೂರಿನಿಂದ ಸಕಲೇಶಪುರ ತಾಲ್ಲೂಕಿನ ಮೂಕನಮನೆ ಜಲಪಾತ ವೀಕ್ಷಿಸಲು ಸಂಜಯ್, ಅಶ್ರಫ್ ಮತ್ತು ವಡಿವೇಲು ಭೇಟಿ ನೀಡಿದ್ದರು. ಭಾರೀ ಮಳೆ ಹಿನ್ನೆಲೆಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಇದೇ ಸಮಯದಲ್ಲಿ ಜಲಪಾತಕ್ಕೆ ಇಳಿದಿದ್ದ ಸಂಜಯ್‌ ಸುತ್ತಲೂ ನೀರು ಆವರಿಸಿಕೊಂಡಿದೆ. ನಂತರ ಹೇಗೋ ಹರಸಾಹಸ ಮಾಡಿ ಮಧ್ಯೆ ಬಂಡೆ ಮೇಲೆ ಕುಳಿತಿದ್ದಾನೆ. ತಕ್ಷಣಕ್ಕೆ ಸ್ನೇಹಿತರು ಹಾಗೂ ಅಲ್ಲೇ ಇದ್ದ ಪ್ರವಾಸಿಗರ ಸಹಾಯದಿಂದ ನೀರಿನಲ್ಲಿ ಸಿಲುಕಿದ್ದ ಸಂಜಯ್‌ಗೆ ರಕ್ಷಣಾ ಕವಚ ನೀಡಿ ಹಗ್ಗಕಟ್ಟಿ ಹೊರಗೆ ಎಳೆದು ತಂದಿದ್ದಾರೆ. ಕೊಂಚ ಎಡವಟ್ಟಾಗಿದ್ದರೂ‌ ಪ್ರವಾಸಿಗ ಸಂಜಯ್ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು. ಗೆಳೆಯರ ಸಮಯ ಪ್ರಜ್ಞೆ ಹಾಗೂ ಸ್ಥಳದಲ್ಲೇ ಇದ್ದ ಇತರೆ ಪ್ರವಾಸಿಗರ ನೆರವಿನೊಂದಿಗೆ ಪ್ರವಾಸಿಗನ ರಕ್ಷಣೆ ಮಾಡಿದ್ದು ಅನಾಹುತವೊಂದು ತಪ್ಪಿದಂತಾಗಿದೆ.