ಡೈಲಿ ವಾರ್ತೆ:24 ಜುಲೈ 2023

ಕೊಲ್ಲೂರು:ಅರಶಿನಗುಂಡಿ ಜಲಪಾತ ವೀಕ್ಷಣೆಗೆ ಬಂದ ಯುವಕನೋರ್ವ ಆಕಸ್ಮಿಕ ಕಾಲುಜಾರಿ ಜಲಪಾತಕ್ಕೆ ಬಿದ್ದು ನಾಪತ್ತೆ! (ವಿಡಿಯೋ ವೀಕ್ಷಿಸಿ)

ಯುವಕ ಜಲಪಾತಕ್ಕೆ ಬಿದ್ದ ವಿಡಿಯೋ ವೀಕ್ಷಿಸಿ

ಕೊಲ್ಲೂರು: ಪ್ರವಾಸಕ್ಕೆಂದು ಸ್ನೇಹಿತನೊಂದಿಗೆ ಕೊಲ್ಲೂರಿಗೆ ಆಗಮಿಸಿದ್ದ ಯುವಕನೋರ್ವ ಜಲಪಾತದಲ್ಲಿ ಕಾಲು ಜಾರಿಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ಕೊಲ್ಲೂರು ಸನೀಪದ ಅರಶಿನ ಗುಂಡಿ ಜಲಪಾತದಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೆ.ಎಚ್.ನಗರ ಸುಣ್ಣದಹಳ್ಳಿ ನಿವಾಸಿ ಶರತ್ ಕುಮಾರ್ (23) ನೀರುಪಾಲಾದ ಯುವಕ.

ರವಿವಾರ ಶರತ್ ಆತನ ಸ್ನೇಹಿತ ಗುರುರಾಜ ಎಂಬವರೊಂದಿಗೆ ಕಾರಿನಲ್ಲಿ ಭದ್ರಾವತಿಯಿಂದ ಕೊಲ್ಲೂರಿಗೆ ಆಗಮಿಸಿದ್ದರು. ಈ ವೇಳೆ ಕೊಲ್ಲೂರು ಗ್ರಾಮದ ಅರಶಿನ ಗುಂಡಿ ಜಲಪಾತ (ಫಾಲ್ಸ್‌) ನೋಡಲು ಹೋಗಿದ್ದು ಅಪರಾಹ್ನ 3:30ರ ಸುಮಾರಿಗೆ ಜಲಪಾತ ಬಳಿ ಬಂಡೆಯೊಂದನ್ನು ಏರಿ ಅದರ ಅಂಚಿನಲ್ಲಿ ನಿಂತಿದ್ದ ಶರತ್ ಆಕಸ್ಮಿಕವಾಗಿ ಕಾಲುಜಾರಿ ಆಯತಪ್ಪಿ ಸೌಪರ್ಣಿಕ ನದಿಗೆ ಬಿದ್ದಿದ್ದು, ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ.

ಶರತ್ ಪತ್ತೆಗಾಗಿ ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ, ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಯುವಕ ಶರತ್ ಕಾಲು ಜಾರಿ ಬೀಳುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.