ಡೈಲಿ ವಾರ್ತೆ: 29 ಜುಲೈ 2023

ಎಕ್ಸ್‌ಪ್ರೆಸ್‌ ವೇನಲ್ಲಿ ದುರಂತ: ಸ್ಯಾಂಡಲ್‌ವುಡ್ ಯುವ ಕಲಾವಿದ ಮೃತ್ಯು..!

ಮಂಡ್ಯ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಶನಿವಾರ ಬೆಳಗಿನ ಜಾವ ಸಂಭವಿಸಿದ ಅಪಘಾತದಲ್ಲಿ ಯುವ ಚಿತ್ರ ಕಲಾವಿದ, ನಟ ಲೋಕೇಶ್ (38) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಂಡ್ಯ ತಾಲ್ಲೂಕಿನ ಯಲಿಯೂರು ಬಳಿ ಈ ದುರ್ಘಟನೆ ನಡೆದಿದೆ. ಎರಡೂ ಕಾಲು, ಎರಡು ಕೈ ತುಂಡಾದ ಸ್ಥಿತಿಯಲ್ಲಿ ಲೋಕೇಶ್ ಅವರ ಮೃತದೇಹ ಪತ್ತೆಯಾಗಿದೆ. ಲೋಕೇಶ್ ಅವರಿಗೆ ಪತ್ನಿ, ಪುತ್ರಿ ಇದ್ದಾರೆ.

ಬೆಂಗಳೂರಿನಿಂದ ಮೈಸೂರು ಕಡೆಗೆ ಬೈಕ್‌ನಲ್ಲಿ ತೆರಳುತ್ತಿದ್ದ ಅವರು ನಿಂತಿದ್ದ ಕಾರ್‌ಗೆ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೊಸ ಬೈಕ್ ಖರೀದಿಸಿದ್ದ ಅವರು ಶುಕ್ರವಾರ ತಡರಾತ್ರಿ 2.30ಕ್ಕೆ ಬೆಂಗಳೂರಿನಿಂದ ತಮ್ಮ ಊರಿಗೆ ತೆರಳುತ್ತಿದ್ದರು.

ಗುಂಡ್ಲುಪೇಟೆ ತಾಲ್ಲೂಕಿನ ದೊಡ್ಡತುಳ್ಳೂರು ಗ್ರಾಮದ ಲೋಕೇಶ್ ಹಲವು ಕಲಾ ನಿರ್ದೇಶಕರ ಬಳಿ ಕೆಲಸ ಮಾಡಿದ್ದರು. ಅಮೂಲ್ಯ ರತ್ನ ಕಿರುಚಿತ್ರ, ಫ್ಯಾಮಿಲಿ ಪ್ಯಾಕ್ ಚಲನಚಿತ್ರದಲ್ಲಿ ಅವರು ಅಭಿನಯಿಸಿದ್ದರು.