ಡೈಲಿ ವಾರ್ತೆ: 30 ಜುಲೈ 2023

ಕೊಲ್ಲೂರಿನ ಅರಶಿನಗುಂಡಿ ಫಾಲ್ಸ್‌ನಲ್ಲಿ ಶರತ್‌ ಮೃತದೇಹ ಪತ್ತೆ

ಕೊಲ್ಲೂರು : ಅರಶಿನಗುಂಡಿ ಫಾಲ್ಸ್‌ನಲ್ಲಿ ರೀಲ್ಸ್‌ ಮಾಡುತ್ತಿದ್ದ ವೇಳೆಯಲ್ಲಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಭದ್ರಾವತಿಯ ಶರತ್‌ ಮೃತದೇಹ ಕೊನೆಗೂ ಪತ್ತೆಯಾಗಿದೆ. ಕಳೆದ ಒಂದು ವಾರದಿಂದಲೂ ಶರತ್ ಗಾಗಿ ಹುಡುಕಾಟ ನಡೆಸಲಾಗಿತ್ತು. ಕಾಲು ಜಾರಿ ಬಿದ್ದ ಜಾಗದಿಂದ ಸುಮಾರು ಇನ್ನೂರು ಮೀಟರ್‌ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.

ಭಾರೀ ಮಳೆಯಾಗುತ್ತಿದ್ದ ವೇಳೆಯಲ್ಲಿ ಭದ್ರಾವತಿಯ ಶರತ್‌ ಎಂಬಾತ ಅರಶಿನಗುಂಡಿ ಫಾಲ್ಸ್‌ ವೀಕ್ಷಣೆಗೆ ಬಂದಿದ್ದ. ಬಂಡೆಯ ಮೇಲೆ ನಿಂತು ಜಲಪಾತವನ್ನು ವೀಕ್ಷಣೆ ಮಾಡುತ್ತಿದ್ದ ರೀಲ್ಸ್‌ ಮಾಡುತ್ತಿದ್ದ. ಈ ವೇಳೆಯಲ್ಲಿ ಶರತ್‌ ಕಾಲು ಜಾರಿ ಜಲಪಾತಕ್ಕೆ ಬಿದ್ದಿದ್ದಾನೆ. ನೀರಿನ ರಭಸಕ್ಕೆ ಶರತ್‌ ಕೊಚ್ಚಿ ಹೋಗಿದ್ದ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆಯನ್ನು ನಡೆಸಿದ್ದರು. ಈಶ್ವರ್‌ ಮಲ್ಪೆ ಹಾಗೂ ಕೋತಿರಾಜ ಕೂಡ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಕಳೆದ ಒಂದು ವಾರದಿಂದಲೂ ನಿರಂತರವಾಗಿ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ತೊಡಕಾಗಿತ್ತು. ಅಲ್ಲದೇ ಈಶ್ವರ್‌ ಮಲ್ಪೆ ಹಾಗೂ ಕೋತಿರಾಜ್‌ ಅವರಿಗೂ ಕೂಡ ಕಾರ್ಯಾಚರಣೆಯನ್ನು ನಡೆಸಲು ಸಾಕಷ್ಟು ಕಷ್ಟ ಎದುರಾಗಿತ್ತು. ರಾತ್ರಿ ಹಾಗೂ ಹಗಲಿನ ವೇಳೆಯಲ್ಲಿ ನಿರಂತರವಾಗಿ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಸುಮಾರು ಇನ್ನೂರು ಅಡಿ ಆಳದಲ್ಲಿ ಮೃತದೇಹ ಪತ್ತೆಯಾಗಿದ್ದು, ಇದೀಗ ಮೃತದೇಹವನ್ನು ಕೊಲ್ಲೂರು ತಂದು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ.