ಡೈಲಿ ವಾರ್ತೆ:04 ಆಗಸ್ಟ್ 2023

ಪತ್ನಿ ಹಾಗೂ ಮಕ್ಕಳನ್ನು ಕೊಂದು ಪತಿ ಆತ್ಮಹತ್ಯೆ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಲಿದೆ ಸಾವಿನ ರಹಸ್ಯ.!

ಬೆಂಗಳೂರು: ಮಕ್ಕಳನ್ನು ಕೊಂದು ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ಘಟನೆಯಲ್ಲಿ ಒಂದೇ ಕುಟುಂಬದ ನಾಲ್ವರು ದಾರುಣವಾಗಿ ಸಾವನ್ನಪ್ಪಿದ್ದರು. ಜುಲೈ 31 ರ ರಾತ್ರಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿತ್ತು. ಇಂದು ವೈದೇಹಿ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಸಾವಿನ ರಹಸ್ಯ ಬಯಲಾಗಲಿದೆ ಎನ್ನಲಾಗಿದೆ. ಪತ್ನಿ ಹೇಮಾವತಿ ಮೇಲೆ ಅನುಮಾನ ಪಟ್ಟು ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದೆ. ಹೇಮಾವತಿ ಕತ್ತಿನ ಭಾಗದಲ್ಲಿ ಕೈ ಗುರುತುಗಳು ಬಿದ್ದಿದ್ದು, ದೇಹದ ಬಣ್ಣ ಬದಲಾಗಿದೆ. ಆಗಸ್ಟ್ 1 ನೇ ತಾರೀಖು ಹೆಂಡತಿಗೆ ಬಲವಂತವಾಗಿ ವಿಷ ಕೊಟ್ಟು ಕತ್ತು ಹಿಸುಕಿ ಕೊಲೆ ಮಾಡಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಆ ನಂತರ ಮಕ್ಕಳ ಕತ್ತನ್ನ ವೇಲಿನಿಂದ ಬಿಗಿದು ಪಾಪಿ ತಂದೆ ಕೊಂದಿದ್ದಾನೆ. ಕೊನೆಗೆ ತಾನೂ ನೇಣುಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಕೊಲೆ ಮಾಡುವ ಮುನ್ನವೇ ಪತಿ ವೀರಾರ್ಜುನ ಮೊಬೈಲ್ ಗಳನ್ನ ಸ್ವಿಚ್ ಅಫ್ ಮಾಡಿದ್ದಾನೆ. ದಂಪತಿ ಮೂಲತಃ ಆಂಧ್ರದವರಾಗಿದ್ದಾರೆ. ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ವೀರಾರ್ಜುನ್ ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು.